ADVERTISEMENT

ಖಾಸಗಿ ದೇವಸ್ಥಾನಗಳ ಕಣ್ಗಾವಲು ಇಲ್ಲ: ಶ್ರೀನಿವಾಸ ಪೂಜಾರಿ ಸ್ಪಷ್ಟನೆ

ಮುಜರಾಯಿ ಸಚಿವ ಕೋಟ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 15:34 IST
Last Updated 4 ಫೆಬ್ರುವರಿ 2021, 15:34 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಬೆಂಗಳೂರು: ಖಾಸಗಿ ದೇವಸ್ಥಾನಗಳ ಮೇಲೆ ಮುಜರಾಯಿ ಇಲಾಖೆಯಿಂದ ಕಣ್ಗಾವಲು ಇಡುವ ಯಾವುದೇ ಚಿಂತನೆಯೂ ಇಲ್ಲ. 2015ರಿಂದ ಜಾರಿಯಲ್ಲಿರುವ ನಿಯಮದ ಪ್ರಕಾರ ನೋಂದಣಿಗೆ ನೆನಪೋಲೆಯನ್ನು ಮಾತ್ರ ಕಳುಹಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗುರುವಾರ ವಿಧಾನ ಪರಿಷತ್‌ನಲ್ಲಿ ಸ್ಪಷ್ಟಪಡಿಸಿದರು.

ಶೂನ್ಯವೇಳೆಯಲ್ಲಿ ಬಿಜೆಪಿಯ ಸುನೀಲ್‌ ಸುಬ್ರಮಣಿ ಪ್ರಸ್ತಾಪ ಮಾಡಿದ ವಿಷಯಕ್ಕೆ ಉತ್ತರ ನೀಡಿದ ಸಚಿವರು, ‘ಖಾಸಗಿ ದೇವಾಲಯಗಳನ್ನೂ ನೋಂದಣಿ ಮಾಡಿಸಬೇಕು ಎಂಬ ನಿಯಮ 2015ರಿಂದಲೂ ಜಾರಿಯಲ್ಲಿದೆ. ಈ ಸಂಬಂಧ ಪ್ರತಿವರ್ಷವೂ ನೆನಪೋಲೆ ಕಳುಹಿಸಲಾಗಿತ್ತು. ಈ ಬಾರಿಯೂ ನೆನಪೋಲೆ ರವಾನೆಯಾಗಿದೆ. ಅದನ್ನೇ ಮಾಧ್ಯಮಗಳಲ್ಲಿ ತಪ್ಪಾಗಿ ಬಿಂಬಿಸಲಾಗಿದೆ’ ಎಂದರು.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಿಂದ ಹೊರಗಿರುವ ದೇವಸ್ಥಾನಗಳ ನೋಂದಣಿಗಾಗಿ ಈ ನಿಯಮ ಜಾರಿಯಲ್ಲಿದೆ. ದೇವಸ್ಥಾನಗಳ ವಿವರ, ಸ್ಥಿರ ಮತ್ತು ಚರ ಆಸ್ತಿಗಳ ಮಾಹಿತಿಯನ್ನು ನೋಂದಣಿ ವೇಳೆ ಸಲ್ಲಿಸಬೇಕೆಂಬುದು ನಿಯಮದಲ್ಲಿದೆ. ಇದು ಕೇವಲ ನೋಂದಣಿಗೆ ಸೀಮಿತವಾದ ನಿಯಮ. ಖಾಸಗಿ ದೇವಾಲಯಗಳ ಮೇಲೆ ಸರ್ಕಾರ ಹಕ್ಕು ಚಲಾಯಿಸುವ ಪ್ರಶ್ನೆಯೇ ಇಲ್ಲ. ಜನರು ಬಯಸಿದರೆ ನೋಂದಣಿಗೆ ಸಂಬಂಧಿಸಿದ ನಿಯಮದ ಬಗ್ಗೆಯೂ ಮರುಪರಿಶೀಲನೆ ನಡೆಸಲು ಸಿದ್ಧ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.