
ಬೆಂಗಳೂರು: ‘ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್ಸಿಎ) ಡಿಸೆಂಬರ್ 7ರಂದು ಚುನಾವಣೆ ನಡೆಸಬೇಕು’ ಎಂದು ನಿರ್ದೇಶಿಸಿರುವ ಹೈಕೋರ್ಟ್, ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಉಪಲೋಕಾಯುಕ್ತ ಬಿ ಸುಭಾಷ್ ಬಿ.ಅಡಿ ಅವರನ್ನು ಚುನಾವಣಾ ಮೇಲ್ವಿಚಾರಕರನ್ನಾಗಿ ನೇಮಕ ಮಾಡಿ ಆದೇಶಿಸಿದೆ.
ನಿಗದಿತ ವೇಳಾಪಟ್ಟಿಯಂತೆ ಇದೇ 30ರಂದು ಚುನಾವಣೆ ನಡೆಯಬೇಕಿತ್ತು. ಚುನಾವಣಾ ಅಧಿಕಾರಿಯಾಗಿರುವ ನಿವೃತ್ತ ಐಎಎಸ್ ಅಧಿಕಾರಿ ಬಿ.ಬಸವರಾಜು, ‘ಕೆಲವು ಗೊಂದಲಗಳು ತಲೆದೋರಿವೆ’ ಎಂಬ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಒಂದು ತಿಂಗಳ ಅವಧಿಗೆ ಮುಂದೂಡಿದ್ದರು.
ಚುನಾವಣೆ ಮುಂದೂಡಿಕೆ ಪ್ರಶ್ನಿಸಿ ಕೆಎಸ್ಸಿಎ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಹಾಗೂ ಬಿ.ಕೆ.ರವಿ ಸಲ್ಲಿಸಿದ್ದ ಎರಡು ಪ್ರತ್ಯೇಕ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲರಾದ ಜಯಕುಮಾರ್ ಎಸ್.ಪಾಟೀಲ್ ಮತ್ತು ಉದಯ್ ಹೊಳ್ಳ ಅವರು ‘ಚುನಾವಣಾಧಿಕಾರಿ ಇದೇ 17ರಂದು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಲೆದೋರಿರುವ ಸಮಸ್ಯೆಯನ್ನು ಸರಿದೂಗಿಸಲು ಚುನಾವಣಾ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಿ ಚುನಾವಣೆ ನಡೆಸಬೇಕು’ ಎಂದು ಕೋರಿದರು.
‘ಚುನಾವಣಾ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ನೇಮಕ ಮಾಡಬೇಕು. ಒಂದು ವೇಳೆ ಚುನಾವಣೆ ವಿಳಂಬವಾದರೆ ರಾಜ್ಯದ ತಂಡ ಯಾವುದೇ ಟೂರ್ನಿಯಲ್ಲಿ ಭಾಗವಹಿಸುವಿಕೆಯಲ್ಲಿ ಅನರ್ಹಗೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೇ ಸರ್ಕಾರವು, ಸೊಸೈಟಿ ಕಾಯ್ದೆಯ ಅನ್ವಯ ಆಡಳಿತಾಧಿಕಾರಿ ನೇಮಕ ಮಾಡಬಹುದು’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ನಿಗದಿತ ದಿನದಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ನವೆಂಬರ್ 30ರಿಂದ ಡಿಸೆಂಬರ್ 30ರವರೆಗೆ ಮುಂದೂಡಿ ಚುನಾವಣಾಧಿಕಾರಿ ಇದೇ 17ರಂದು ಹೊರಡಿಸಿರುವ ನೋಟಿಸ್ ವಜಾ ಮಾಡಲಾಗಿದೆ’ ಎಂದು ಆದೇಶಿಸಿತು.
‘ಕೆಎಸ್ಸಿಎ ಹೊಂದಿರುವ ಹಾಲಿ ಬೈ–ಲಾದ ಪ್ರಕಾರ ನ್ಯಾಯಯುತ ಮತ್ತು ಪಾರದರ್ಶಕ ಚುನಾವಣೆ ನಡೆಸಬೇಕು. ಡಿಸೆಂಬರ್ 7ರಂದು ಬೆಳಿಗ್ಗೆ 11ರಿಂದ ಸಂಜೆ 7 ಗಂಟೆಯವರೆಗೆ ಮತದಾನ ನಡೆಯುವಂತೆ ನೋಡಿಕೊಳ್ಳಬೇಕು. ನಂತರ ಫಲಿತಾಂಶ ಪ್ರಕಟಿಸಬೇಕು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಅವರನ್ನು ಚುನಾವಣಾ ಉಸ್ತುವಾರಿ ವಹಿಸಲು ಮನವಿ ಮಾಡಲಾಗಿದೆ’ ಎಂದು ವಿವರಿಸಿತು.
‘ಈಗಾಗಲೇ ನಾಮಪತ್ರ ಸ್ವೀಕಾರವಾಗಿದ್ದು, ಪರಿಶೀಲನೆ ನವೆಂಬರ್ 24ರಂದು ನಡೆಯಲಿದೆ. ಅಂದು 6 ಗಂಟೆಯೊಳಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಬೇಕು. ನಾಮಪತ್ರ ಹಿಂಪಡೆಯಲು ನವೆಂಬರ್ 26ರಂದು ಕಾಲಾವಕಾಶ ನೀಡಬೇಕು. ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ನವೆಂಬರ್ 26ಕ್ಕೇ ಪ್ರಕಟಿಸಬೇಕು’ ಎಂದೂ ನ್ಯಾಯಪೀಠ ಇದೇ ವೇಳೆ ಚುನಾವಣಾ ಅಧಿಕಾರಿಗೆ ನಿರ್ದೇಶಿಸಿದೆ.
ಆದೇಶಕ್ಕೆ ಪ್ರತಿಯಾಗಿ, ಚುನಾವಣಾಧಿಕಾರಿ ಪರ ಹಾಜರಿದ್ದ ಪದಾಂಕಿತ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರು, ‘ನ್ಯಾಯಾಲಯ ನಿಗದಿಪಡಿಸಿದ ವೇಳಾಪಟ್ಟಿಗೆ ಅನುಗುಣವಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಉಸ್ತುವಾರಿಯಲ್ಲಿ ಚುನಾವಣೆ ನಡೆಸಲಾಗುವುದು’ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಸ್.ಸೂರಜ್ ವಕಾಲತ್ತು ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.