ಬಾಗಲಕೋಟೆ: ‘ಸಮಾಜದಲ್ಲಿ ಬೆಂಕಿ ಇಡುವ ಕೆಲಸ ಮಾಡುತ್ತಿರುವ ಪ್ರಮೋದ್ ಮುತಾಲಿಕ್ ಅಂತಹ ತಳಿಗಳನ್ನು ಮೊದಲು ಒದ್ದು ಒಳಗೆ ಹಾಕಬೇಕು. ಆಗ ಎಲ್ಲವೂ ಸರಿ ಹೋಗುತ್ತದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬಾದಾಮಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ರಾಮಸೇನೆಯೋ ಅಥವಾ ರಾವಣ ಸೇನೆಯೋ ಗೊತ್ತಾಗುತ್ತಿಲ್ಲ. ಕೋಮು ದ್ವೇಷ ಭಾವನೆ ಬಿಟ್ಟು ಎಲ್ಲವೂ ತಣ್ಣಗಾಗಬೇಕು ಎಂದು ಜನರು ಬಯಸಿದಾಗಲೆಲ್ಲ ಜಾತಿ–ಜನಾಂಗದ ನಡುವೆ ಸಾಮರಸ್ಯ ಕೆಡಿಸುವ ಕೆಲಸ ಈ ಸಂಘಟನೆಗಳಿಂದ ಮತ್ತೆ ಮತ್ತೆ ನಡೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಇವರ (ಶ್ರೀರಾಮಸೇನೆ) ಆಟಗಳನ್ನು ಸರ್ಕಾರ ಯಾಕೆ ಮೌನವಾಗಿ ಒಪ್ಪಿಕೊಂಡಿದೆಯೋ ಗೊತ್ತಿಲ್ಲ. ಪ್ರಮೋದ್ ಮುತಾಲಿಕ್ ಬಂಧನಕ್ಕೆ ಸರ್ಕಾರ ಆದೇಶಿಸಲಿ ಆಗ ಎಲ್ಲವೂ ಸರಿಯಾಗುತ್ತದೆ. ಈ ನಾಡು ಸರ್ವ ಜನಾಂಗದ ಶಾಂತಿಯ ತೋಟ ಎಂಬುದು ನೆನಪಿರಲಿ’ ಎಂದರು.
‘ಕಳೆದ ವರ್ಷದ ಬೆಳೆ ವಿಮೆಯ ಪರಿಹಾರ ಮೊತ್ತ ರೈತರಿಗೆ ಇನ್ನೂ ಬಿಡುಗಡೆ ಆಗಿಲ್ಲ ಎಂಬುದನ್ನು ಪತ್ರಿಕೆಗಳಲ್ಲಿ ಓದಿದೆ. ಸಂಘಟನೆಗಳಿಂದ ಆ ಬಗ್ಗೆ ಹೋರಾಟ ನಡೆಯಬೇಕಿದೆಯೇ ಹೊರತು ಕೋಮು ದ್ವೇಷ ಬಿತ್ತುವುದು ಅಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.