ADVERTISEMENT

ಬ್ರಿಟಿಷರಂತೆ ಒಡೆದಾಳುವ ಕುಮಾರಸ್ವಾಮಿ: ಆರ್‌. ಅಶೋಕ

ಮತಗಳ ಮೇಲೆ ಕಣ್ಣಿಟ್ಟು ಬ್ರಾಹ್ಮಣರ ಅವಹೇಳನ l ಸಚಿವ ಆರ್‌.ಅಶೋಕ ಟೀಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 5:17 IST
Last Updated 9 ಫೆಬ್ರುವರಿ 2023, 5:17 IST
ಆರ್‌. ಅಶೋಕ
ಆರ್‌. ಅಶೋಕ    

ಬೆಂಗಳೂರು: ಬ್ರಿಟಿಷರು ಹಿಂದೂ– ಮುಸ್ಲಿಮರನ್ನು ಒಡೆದು ಆಳಿದಂತೆ, ಎಚ್‌.ಡಿ.ಕುಮಾರಸ್ವಾಮಿ ಜಾತಿಗಳನ್ನು ಒಡೆಯುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್‌.ಅಶೋಕ ಅವರು ಹರಿಹಾಯ್ದರು.

ಸುದ್ದಿಗಾರರ ಪ್ರಶ್ನೆಗಳಿಗೆ ಬುಧವಾರ ಉತ್ತರಿಸಿದ ಅವರು, ಚುನಾವಣೆ ಹೊತ್ತಿಗೆ ಮತಗಳ ಮೇಲೆ ಕಣ್ಣಿಟ್ಟು ಬ್ರಾಹ್ಮಣರನ್ನು ಒಡೆಯುವ ಮತ್ತು ಅವಹೇಳನ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರೀತಿಯಲ್ಲಿ ಯಾವ ಮುಖ್ಯಮಂತ್ರಿಯೂ ಜಾತಿಯ ಬಗ್ಗೆ ನಿಂದನೆ ಮಾಡಿರಲಿಲ್ಲ. ಎಸ್‌.ಎಂ.ಕೃಷ್ಣ ಸೇರಿ ಎಲ್ಲ ಮುಖ್ಯಮಂತ್ರಿಗಳು ಘನತೆಯಿಂದಲೇ ನಡೆದುಕೊಂಡಿದ್ದಾರೆ. ಆದರೆ, ಕುಮಾರಸ್ವಾಮಿ ಮಾಜಿ
ಮುಖ್ಯಮಂತ್ರಿಗಳ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ ಎಂದರು.

ADVERTISEMENT

‘ನಮ್ಮ ಪಕ್ಷದಲ್ಲಿ ಪ್ರತಿಭೆಯ ಆಧಾರದಲ್ಲಿಯೇ ಪ್ರಧಾನಮಂತ್ರಿ, ಮುಖ್ಯಮಂತ್ರಿ ಮತ್ತು ಮಂತ್ರಿಗಳ ಸ್ಥಾನ ನೀಡಲಾಗುತ್ತದೆ. ಆದರೆ, ಕುಟುಂಬ ಆಧಾರಿತ ಪಕ್ಷವಾದ ಜೆಡಿಎಸ್‌ನಲ್ಲಿ ಕುಟುಂಬದ ಸದಸ್ಯತ್ವವೇ ಮುಖ್ಯ. ಮುಖ್ಯಮಂತ್ರಿ ಸ್ಥಾನ ನಿರ್ಧಾರ
ವಾಗುವುದೂ ಅವರ ಮನೆಯಲ್ಲೇ. ಬಿಜೆಪಿಯಲ್ಲಿ ಚುನಾವಣೆ ಬಳಿಕ ಮುಖ್ಯಮಂತ್ರಿ ಸ್ಥಾನವನ್ನು ಶಾಸಕಾಂಗ ಪಕ್ಷದಲ್ಲಿ ತೀರ್ಮಾನಿಸಲಾಗುತ್ತದೆ. ಈಗ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದು, ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ’ ಎಂದರು.

‘ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಲಾಗುವುದು. ಅಲ್ಲದೇ, ಪಕ್ಷ ದುರ್ಬಲವಾಗಿರುವ ವಿಧಾನಸಭಾ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.