ADVERTISEMENT

ಟ್ರ್ಯಾಕ್ಟರ್‌ಗೆ ಅವಕಾಶ ನೀಡದಿದ್ದರೆ ಹೆದ್ದಾರಿ ಬಂದ್: ಕುರುಬೂರು ಶಾಂತಕುಮಾರ್

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 19:08 IST
Last Updated 25 ಜನವರಿ 2021, 19:08 IST
ಕುರುಬೂರು ಶಾಂತಕುಮಾರ್‌
ಕುರುಬೂರು ಶಾಂತಕುಮಾರ್‌   

ಬೆಂಗಳೂರು: ‘ನಗರಕ್ಕೆ ಟ್ರ್ಯಾಕ್ಟರ್ ತರಲು ಅವಕಾಶ ನೀಡದಿದ್ದರೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಾಗುವುದು’ ಎಂದು ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

‘ಗಣರಾಜ್ಯೋತ್ಸವ ಆಚರಣೆಗೆ ನಮ್ಮೀಂದ ಯಾವುದೇ ಧಕ್ಕೆ ಆಗುವುದಿಲ್ಲ. ಶಾಂತ ರೀತಿಯಲ್ಲಿ ಟ್ರ್ಯಾಕ್ಟರ್, ಬೈಕ್, ಖಾಸಗಿ ವಾಹನಗಳಲ್ಲಿ ರ‍್ಯಾಲಿ ನಡೆಸಲಿದ್ದೇವೆ’ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಹೇಳಿದರು.

‘ದೆಹಲಿಯಲ್ಲಿ ನಡೆಯುತ್ತಿರುವ ಟ್ರ್ಯಾಕ್ಟರ್ ಪರೇಡ್ ಬೆಂಬಲಿಸಿ ಬೆಂಗಳೂರಿನಲ್ಲೂ ಟ್ರ್ಯಾಕ್ಟರ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಪೊಲೀಸರ ಅನುಮತಿ ಬೇಕಿಲ್ಲ. ಸರ್ಕಾರ ನಮ್ಮನ್ನು ತಡೆಯುವ ಪ್ರಯತ್ನ ಮಾಡಬಾರದು’ ಎಂದು ಎಚ್ಚರಿಸಿದರು.

ADVERTISEMENT

ರೈತ ಹೋರಾಟಗಾರರು ಪ್ರತ್ಯೇಕವಾಗಿ ಪರೇಡ್ ಆರಂಭಿಸುತ್ತಿರುವ ಕುರಿತ ಪ್ರಶ್ನೆಗೆ, ‘ಈ ಹೋರಾಟಕ್ಕೆ ವಿವಿಧ ನಾಯಕರು ನಾಯಕತ್ವ ವಹಿಸಿದ್ದರೂ ಮಧ್ಯಾಹ್ನ 12ರ ಹೊತ್ತಿಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಒಟ್ಟಾಗಲಿದ್ದೇವೆ’ ಎಂದು ತಿಳಿಸಿದರು.

‘ರಾಜಕಾರಣಿಗಳ ಬೆಂಬಲವನ್ನು ನಾವು ಕೇಳಿಲ್ಲ. ಅವರು ಪ್ರತ್ಯೇಕವಾಗಿ ಹೋರಾಟ ಮಾಡಲಿ. ಮಂಗಳವಾರ ಅವರು ನಮ್ಮ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡುವುದಿಲ್ಲ’ ಎಂದೂ ಸ್ಪಷ್ಟಪಡಿಸಿದರು.

‘ಸಿನಿಮಾ ಡೈಲಾಗ್ ಹೊಡೆಯುವ ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೆ ರೈತರು ಸೊಪ್ಪು ಹಾಕುವುದಿಲ್ಲ. ಅವರೊಬ್ಬ ಸಿನಿಮಾ ಮಂತ್ರಿ. ಅವರಿಗೆ ಕೃಷಿಯ ಗಂಧವೇ ಗೊತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.