ಧಾರವಾಡ: ‘ಕೂಗುಮಾರಿಗಳ ಕಾಲಘಟ್ಟದಲ್ಲಿರುವ ಕರ್ನಾಟಕದಲ್ಲಿ ಸಾಂಸ್ಕೃತಿಕ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ’ ಎಂದು ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘ ಮಂಗಳವಾರ ಆಯೋಜಿಸಿದ್ದ ಡಾ.ಚೆನ್ನವೀರ ಕಣವಿ ಹಾಗೂ ಶಾಂತಾದೇವಿ ಕಣವಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂಥ ಹೊತ್ತಿನಲ್ಲಿ ಮೃದುಮಾತಿಗೆ ಸ್ಥಾನವಿಲ್ಲದಂತಾಗಿದೆ.ಸಮಚಿತ್ತದಿಂದ ಖಚಿತವಾಗಿ ನುಡಿಯುವ ವ್ಯಕ್ತಿತ್ವದ ಅಗತ್ಯವಿದೆ. ಆದರೆ ಅಂಥ ವ್ಯಕ್ತಿ ಎಲ್ಲಿಯೂ ಕಾಣಿಸುತ್ತಿಲ್ಲ. ಸಾಮಾಜಿಕ ಘನತೆಯನ್ನು ಕಾಯ್ದುಕೊಂಡ ವ್ಯಕ್ತಿತ್ವಗಳು ಇಲ್ಲದಿದ್ದರೆ ಯಾವ ಹೋರಾಟಕ್ಕೂ ಅರ್ಥವಿರದು. ಸುದೀರ್ಘ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಕರ್ನಾಟಕ ವಿದ್ಯಾವರ್ಧಕ ಸಂಘವು ಮತ್ತೆ ಕನ್ನಡ ಸಂಸ್ಕೃತಿಯನ್ನು ರಕ್ಷಿಸಲು ನಾಯಕತ್ವ ಪಡೆಯಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ’ ಎಂದರು.
‘ಸಮಾಜದಲ್ಲಿ ಬದಲಾವಣೆ ತರಬೇಕಾದರೆ ಸಾತ್ವಿಕತೆಯ ಶಕ್ತಿ ಏನು ಎಂಬುದನ್ನು ಹೊಸ ತಲೆಮಾರಿಗೆ ಪರಿಚಯಿಸಬೇಕಿದೆ. ಅದಕ್ಕೊಂದು ಮಾದರಿ ಸೃಷ್ಟಿಯಾಗಬೇಕು. ರಾಜ್ಯದಲ್ಲಿ ಎಲ್ಲಾ ಕಾಲಘಟ್ಟದಲ್ಲೂ ಎದುರಾದ ಸಾಂಸ್ಕೃತಿಕ ಹೋರಾಟಗಳಲ್ಲಿ ಸಾತ್ವಿಕ ಶಕ್ತಿಯಾಗಿದ್ದ ಡಾ.ಕಣವಿ ಅವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಅಲ್ಲೊಂದು ಶಕ್ತಿ ತುಂಬಿರುತ್ತಿತ್ತು. ಈಗ ಅವರಿಲ್ಲದೆ ಹೋರಾಟಗಳೂ ಬಲಹೀನವಾದಂತಾಗಿವೆ’ ಎಂದರು.
ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ನಂತರ ಕವಿ ಕಣವಿ ದಂಪತಿ ಕುರಿತು ವಿವಿಧ ಗೋಷ್ಠಿಗಳು ನಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.