ಹುಬ್ಬಳ್ಳಿ: ‘ಯಾದಗಿರಿಯಲ್ಲಿ ಫಾರ್ಮಾ ಪಾರ್ಕ್ ಸ್ಥಾಪಿಸಲು ಸಲ್ಲಿಸಿದ್ದ ಪ್ರಸ್ತಾವವನ್ನು ಕೇಂದ್ರ ನೀತಿ ಆಯೋಗ ಮಾನ್ಯ ಮಾಡಿಲ್ಲ‘ ಎಂದು ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದರು.
‘ಫಾರ್ಮಾ ಪಾರ್ಕ್ ಸ್ಥಾಪಿಸಲು ಅನುಮತಿ ಕೋರಿ ವಿವಿಧ ರಾಜ್ಯಗಳಿಂದ ಪ್ರಸ್ತಾವ ಬಂದಿದ್ದವು. ರಾಜ್ಯ ಸರ್ಕಾರಗಳು ಒದಗಿಸಲಿರುವ ಸೌಲಭ್ಯ ಹಾಗೂ ಅನುಕೂಲಗಳನ್ನು ಪರಿಗಣಿಸಿ ನೀತಿ ಆಯೋಗವು ಗುಜರಾತ್, ಆಂಧ್ರ ಹಾಗೂ ಹಿಮಾಚಲಪ್ರದೇಶ ರಾಜ್ಯಗಳನ್ನು ಫಾರ್ಮಾ ಪಾರ್ಕ್ ಸ್ಥಾಪನೆಗೆ ಆಯ್ಕೆ ಮಾಡಿದೆ’ ಎಂದು ಶುಕ್ರವಾರ ಮಾಧ್ಯಮದವರಿಗೆ ತಿಳಿಸಿದರು.
‘ದೇಶದಲ್ಲಿ ನ್ಯಾನೋ ಗೊಬ್ಬರ ಪ್ರಸಿದ್ಧಿ ಪಡೆಯುತ್ತಿದೆ. ರೈತರಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ಗೊಬ್ಬರದಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ಪಡೆಯಬಹುದಾಗಿದೆ. ಸರ್ಕಾರದಿಂದ ಸಬ್ಸಿಡಿ ಸಹ ದೊರೆಯುತ್ತಿದೆ’ ಎಂದರು.
‘ಈಗ ದೇಶದಲ್ಲಿ ರೈತರಿಗೆ ಅಗತ್ಯ ಪ್ರಮಾಣದಲ್ಲಿ ಗೊಬ್ಬರ ಸಿಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಬಂದ್ ಆಗಿದ್ದ ಐದು ರಸಗೊಬ್ಬರ ಕಾರ್ಖಾನೆಗಳನ್ನು ಪುನರಾರಂಭಿಸಲಾಗಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.