ADVERTISEMENT

‘ಬರೆನು ನಾನು, ಬಿಡೆವು ನಾವು’– ಲಾರಿ ಹತ್ತಲು ಒಲ್ಲೆನೆಂದು ಕಣ್ಣೀರಾದ ಲಕ್ಷ್ಮಿ ಆನೆ

ಮೈಸೂರು ದಸರಾ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 9:24 IST
Last Updated 10 ಅಕ್ಟೋಬರ್ 2019, 9:24 IST
ಲಕ್ಷ್ಮಿ ಆನೆಯನ್ನು ಲಾರಿಗೆ ಹತ್ತಿಸುವ ಪ್ರಯತ್ನದಲ್ಲಿ ಗೋಪಿ
ಲಕ್ಷ್ಮಿ ಆನೆಯನ್ನು ಲಾರಿಗೆ ಹತ್ತಿಸುವ ಪ್ರಯತ್ನದಲ್ಲಿ ಗೋಪಿ    

ಮೈಸೂರು: ವೈಭವದ ದಸರಾ ಮೆರವಣಿಗೆ ಮುಗಿಸಿರುವ ಗಜಪಡೆಯಲ್ಲಿ ಗುರುವಾರ ಆತಂಕ ಛಾಯೆ. ಇಷ್ಟು ದಿನ ಅರಮನೆಯ ಸುತ್ತಲೂ ಓಡಾಡುತ್ತ ನಗರ ಪ್ರದಕ್ಷಿಣೆ ಮಾಡುತ್ತಿದ್ದ ಆನೆಗಳಿಗೆ ಮರಳಿ ಕಾಡಿಗೆ ಹೋಗಲು ಮನಸ್ಸೇ ಬರಲಿಲ್ಲ.

ಮೂಲ ಶಿಬಿರಗಳಿಗೆ ಕರೆದೊಯ್ಯಲು ಬಂದಿದ್ದಲಾರಿಗಳನ್ನು ಕಾಣುತ್ತಿದ್ದಂತೆ ಆನೆಗಳು ಹಿಂದಡಿಯಿಟ್ಟವು.

ಈ ಬಾರಿ ದಸರಾಗೆ ಬಂದಿದ್ದ ಅತಿ ಕಿರಿ ಆನೆ ಎನಿಸಿಕೊಂಡಿದ್ದ17 ವರ್ಷದ ಲಕ್ಷ್ಮಿಗೆ ಮಾತ್ರಯಾರೇ ಪುಸಲಾಯಿಸಿದರೂ,ಏನೇ ಪ್ರಯತ್ನಿಸಿದರೂ ಹಟ ಕಡಿಮೆಯಾಗಲಿಲ್ಲ.ಮನೆ ಬಿಟ್ಟು ಬರಲು ಒಲ್ಲದ ಮಕ್ಕಳಂತೆ‘ನಾ ಬರೋದಿಲ್ಲ..., ನಾನೆಲ್ಲೂ ಬರೋದಿಲ್ಲ...’ಎಂದು ರಚ್ಚೆಹಿಡಿಯಿತು.

ADVERTISEMENT

ಹಗ್ಗ ಜಗ್ಗಿ ಬೇರೆ ಆನೆಗಳ ಮೇಲೂ ಆಕ್ರೋಶ ವ್ಯಕ್ತಪಡಿಸಿತು. ಲಕ್ಷ್ಮಿಯನ್ನು ಸಮಾಧಾನಪಡಿಸಿ ಶಿಬಿರಕ್ಕೆ ಕರೆದೊಯ್ಯಲು ಅಂಬಾರಿ ಹೊರುವ ಅರ್ಜುನನೇ ಬಂದರೂ ಪ್ರಯೋಜನವಾಗಲಿಲ್ಲ.

ಮೊದಲಿಗೆ ಗೋಪಿ, ನಂತರ ಅರ್ಜುನ, ದುರ್ಗಾಪರಮೇಶ್ವರಿ ಹಾಗೂ ವಿಕ್ರಂ ಆನೆಗಳು ಸೊಂಡಲಿನಿಂದ ತಳ್ಳಿ, ಮುಂದಲೆ ಮತ್ತು ದಂತದಿಂದ ನೂಕಿದರೂ ಲಕ್ಷ್ಮಿ ಮಾತು ಕೇಳಲಿಲ್ಲ. ‘ಬೇಕಾದರೆ ನೀವೆಲ್ಲ ಹೋಗಿ, ನಾನು ಬರಲ್ಲ...’ಎಂದು ತನ್ನ ನಿರ್ಧಾರಕ್ಕೆ ಗಟ್ಟಿಯಾಗಿ ಅಂಟಿಕೊಂಟಿತು.ಮಾವುತರು, ಸಹಾಯಕರು, ಅರಣ್ಯ ಸಿಬ್ಬಂದಿಯೂ ಹೈರಾಣಾದರು.

ಎರಡೂವರೆ ಗಂಟೆ ದಾಟುತ್ತಿದ್ದಂತೆ ಸಿಬ್ಬಂದಿ ಮತ್ತೊಂದು ಲಾರಿ ತರಿಸಿ ಹೊಸ ತಂತ್ರಕ್ಕೆ ಮೊರೆಹೋದರು. ಸುತ್ತ ಮೂರು ಲಾರಿ ನಿಲ್ಲಿಸಿ, ಗೋಪಿ ಆನೆ ಸಹಾಯದಿಂದ ಲಕ್ಷ್ಮಿಯನ್ನು ಲಾರಿ ಏರುವಂತೆ ಮಾಡಲಾಯಿತು. ಆನೆಗಳು ಒಲ್ಲದ ಮನಸ್ಸಿನಿಂದ ಲಾರಿ ಏರುತ್ತಿರುವುದು ಅವುಗಳ ವರ್ತನೆಯೇ ತೋರುತ್ತಿತ್ತು.

ಇದೇ ಸಂದರ್ಭ ಬೇರೆಬೇರೆ ಸ್ಥಳಗಳಲ್ಲಿ ಆನೆಗಳನ್ನು ಲಾರಿಗೆ ಹತ್ತಿಸುವ ಪ್ರಯತ್ನವಂತು ಮುಂದುವರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.