ಬೆಳಗಾವಿ: ‘ಕಾನೂನು ಹೋರಾಟಕ್ಕೆ ನಾನೂ ಸಿದ್ಧನಿದ್ದೇನೆ. ಅವರ ವ್ಯಕ್ತಿತ್ವ ಎಂತಹದ್ದು ಎನ್ನುವುದು ಬೆಳಗಾವಿಯ ಮೂಲೆ ಮೂಲೆಗೂ ಗೊತ್ತಿದೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಸದಸ್ಯ ಸ್ಥಾನಕ್ಕಾಗಿ ನನ್ನ ಕಾಲಿಗೆ ಬಿದ್ದಿದ್ದರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕುಕ್ಕರ್ ಹಂಚಿಕೆಯ ವಿಷಯವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಲಕ್ಷ್ಮಿ ಹೆಬ್ಬಾಳಕರ ನೀಡಿದ ಹೇಳಿಕೆಗೆ ಅವರು ಪ್ರತಿಕ್ರಿಯೆ ನೀಡಿದರು.
‘ನಾನು ವೈಯಕ್ತಿಕ ನಿಂದನೆ ಮಾಡಿಲ್ಲ. ನಮ್ಮ ಪಕ್ಷದ (ಬಿಜೆಪಿ) ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲು ವಾಸ್ತವ ಸ್ಥಿತಿ ಹೇಳಿದ್ದೇನೆ. ಕುಕ್ಕರ್ಗಾಗಿ ನಾನು ದುಡ್ಡು ಕೊಟ್ಟಿಲ್ಲವೆಂದರೆ ಅವರು ತಮ್ಮ ಮನೆ ದೇವರು ಹಟ್ಟಿವೀರಭದ್ರೇಶ್ವರನ ಮೇಲೆ ಆಣೆ ಮಾಡಲಿ. ನಾನೂ ಆಣೆ ಮಾಡಲು ಸಿದ್ಧ’ ಎಂದರು.
‘ಕಳೆದ ಚುನಾವಣೆ ಹೇಗೆ ನಡೆಯಿತು, ಯಾರು ಏನು ಮಾಡಿದರು ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ನಾನು ಏನು ಎನ್ನುವುದನ್ನು ಮುಂದಿನ ಚುನಾವಣೆಯಲ್ಲಿ ತೋರಿಸುತ್ತೇನೆ. ಆ ಹೆಣ್ಣು ಮಗಳಿಗೆ ರಾಜಕಾರಣ ಗೊತ್ತಿಲ್ಲ. ಮೊದಲ ಬಾರಿ ನನ್ನನ್ನು ಭೇಟಿಯಾದಾಗ ಕಾಲಿಗೆ ಎರಗಿ, ಬುಡಾ ಸದಸ್ಯ ಸ್ಥಾನ ಕೇಳಿದ್ದರು. ಲಿಂಗಾಯತ ಹೆಣ್ಣು ಮಗಳು ಬೆಳೆಯಲಿ ಅಂತಾ ಸಹಾಯ ಮಾಡಿದ್ದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.