ADVERTISEMENT

‘ರಾಮ್‌–ರಹೀಮ್‌’ ಕೂಡಿಕೆ ಪ್ರಕರಣ | ಒತ್ತುವರಿ ಆರೋಪ ನಿಜ: ಹೈಕೋರ್ಟ್‌ಗೆ ಸರ್ಕಾರ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 15:45 IST
Last Updated 21 ನವೆಂಬರ್ 2025, 15:45 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಕೋಲಾರ ತಾಲ್ಲೂಕು ವೇಮಗಲ್ ಹೋಬಳಿಯ ಕ್ಯಾಲನೂರು ಗ್ರಾಮದಲ್ಲಿ ವಿರಾಟ್ ಹಿಂದೂ ಸೇನಾ ಚಾರಿಟಬಲ್ ಟ್ರಸ್ಟ್ ಹಾಗೂ ಜಾಮೀಯಾ ಮಸೀದಿ ಟ್ರಸ್ಟ್‌ಗಳು ಸರ್ಕಾರದ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದು ನಿಜ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

‘ಒತ್ತುವರಿ ತೆರವುಗೊಳಿಸುವಂತೆ ಕೋಲಾರ ತಹಶೀಲ್ದಾರ್ ಜಾರಿಗೊಳಿಸಿರುವ ನೋಟಿಸ್ ರದ್ದುಪಡಿಸಬೇಕು’ ಎಂದು ಕೋರಿ ‘ವಿರಾಟ್ ಹಿಂದೂ ಸೇವಾ ಚಾರಿಟಬಲ್ ಟ್ರಸ್ಟ್’ ಹಾಗೂ ‘ಜಾಮೀಯಾ ಮಸ್ಜಿದ್ ಕಮಿಟಿ’ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ‘ನ್ಯಾಯಾಲಯದ ನಿರ್ದೇಶನದಂತೆ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಎರಡೂ ಸಂಸ್ಥೆಗಳು ಸರ್ಕಾರಿ ಜಾಗ ಒತ್ತುವರಿ ಮಾಡಿವೆ. ತೆರವುಗೊಳಿಸಲು ಸತತವಾಗಿ ನೋಟಿಸ್ ಕೊಡಲಾಗಿದ್ದು, ಈ ಕುರಿತಾದ ವರದಿಗಳಿವೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ADVERTISEMENT

‘ವಿರಾಟ್ ಹಿಂದೂ ಸೇವಾ ಟ್ರಸ್ಟ್ ಸರ್ವೆ ನಂಬರ್ 73 ಮತ್ತು 74ರಲ್ಲಿನ 10 ಗುಂಟೆ ಸರ್ಕಾರಿ ಜಾಗದಲ್ಲಿ 5.15 ಗುಂಟೆ ಜಾಗವನ್ನು ಅತಿಕ್ರಮಿಸಿದೆ. ಇಲ್ಲಿ 15 ಅಂಗಡಿಗಳನ್ನು ನಿರ್ಮಿಸಲಾಗಿದ್ದು ಪ್ರತಿ ತಿಂಗಳೂ ತಲಾ ₹1,200 ಬಾಡಿಗೆ ವಸೂಲಿ ಮಾಡುತ್ತಿದೆ. ಅದೇ ರೀತಿ ಜಾಮೀಯಾ ಮಸೀದಿ ಕಮಿಟಿಯವರು 4.75 ಗುಂಟೆ ಜಾಗದಲ್ಲಿ 10 ಅಂಗಡಿಗಳನ್ನು ನಿರ್ಮಿಸಿ ಪ್ರತಿ ತಿಂಗಳೂ ತಲಾ ₹1,200 ಬಾಡಿಗೆ ವಸೂಲಿ ಮಾಡುತ್ತಿದ್ದಾರೆ’ ಎಂದರು.

‘ಬಾಡಿಗೆ ಹಣವನ್ನು ಟ್ರಸ್ಟ್ ಮತ್ತು ಸಮಿತಿಯ ಖಾತೆಗಳಲ್ಲಿ ನಿರ್ವಹಿಸಲಾಗುತ್ತಿದ್ದು, ಯಾವುದೇ ಸರ್ಕಾರಿ ಖಾತೆಗೆ ಜಮಾ ಮಾಡುತ್ತಿಲ್ಲ. ಅಂಗಡಿಗಳನ್ನು ನಿರ್ಮಿಸಿಕೊಳ್ಳಲು ಯಾವುದೇ ರೀತಿ ಅನುಮತಿಯನ್ನೂ ನೀಡಿಲ್ಲ ಎಂಬುದು ವರದಿಯಲ್ಲಿ ಕಂಡುಬಂದಿದೆ’ ಎಂದು ತಿಳಿಸಿದರು.

ಅರ್ಜಿದಾರರ ಪರ ವಕೀಲರು, ‘ಅರ್ಜಿದಾರರು ಅನುಭೋಗಿಸುತ್ತಿರುವ ಆಸ್ತಿ ಗ್ರಾಮ ಠಾಣಾ ಜಮೀನು. ಸರ್ಕಾರಿ ಕಂದಾಯ ಜಮೀನು ಅಲ್ಲ. ಅರ್ಜಿದಾರರಿಗೆ ಈ ಜಮೀನು ಮಂಜೂರು ಮಾಡಬೇಕು ಎಂದು ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಭೂ ಮಂಜೂರಾತಿ ಪ್ರಸ್ತಾವನೆಯು ಸದ್ಯ ಜಿಲ್ಲಾಧಿಕಾರಿ ಮುಂದೆ ಪರಿಶೀಲನೆಯಲ್ಲಿದೆ. ಜಮೀನು ಒತ್ತುವರಿ ಮಾಡಿದ್ದು ಎಂದಾದರೆ, ಸಂಘಗಳ ನೋಂದಣಿ ಕಾಯ್ದೆಯಂತೆ ತನಿಖೆ ನಡೆಸಬಹುದು’ ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಅರ್ಜಿದಾರರು ಶನಿವಾರ (ನ.22) ಬೆಳಿಗ್ಗೆ 11.30ಕ್ಕೆ ತಹಶೀಲ್ದಾರ್‌ ಮುಂದೆ ಹಾಜರಾಗಿ ನೋಟಿಸ್‌ಗೆ ಆಕ್ಷೇಪಣೆ ಸಲ್ಲಿಸಬೇಕು. ಆಕ್ಷೇಪಣೆ ಪರಿಶೀಲಿಸಿ ತಹಶೀಲ್ದಾರ್ ಐದು ದಿನಗಳಲ್ಲಿ ನ್ಯಾಯಾಲಯಕ್ಕೆ ಲಿಖಿತ ವರದಿ ಸಲ್ಲಿಸಬೇಕು. ಅಂತೆಯೇ, ಅರ್ಜಿದಾರರಿಗೆ ಜಮೀನು ಮಂಜೂರು ಮಾಡುವ ಪ್ರಸ್ತಾವನೆ ಬಗ್ಗೆ ಜಿಲ್ಲಾಧಿಕಾರಿ ಯಾವ ನಿಲುವು ಹೊಂದಿದ್ದಾರೆ ಎಂಬುದನ್ನು ತಿಳಿಸಬೇಕು’ ಎಂದು ನಿರ್ದೇಶಿಸಿ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.