ನಂಜನಗೂಡು: ‘ದಕ್ಷಿಣ ಕಾಶಿ’ ಎಂದೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಮಂಗಳವಾರ ಭಕ್ತ ಸಾಗರದ ನಡುವೆ ಪಂಚ ಮಹಾರಥೋತ್ಸವ ವೈಭವದಿಂದ ನಡೆಯಿತು.
ಗಣಪತಿ, ಶ್ರೀಕಂಠೇಶ್ವರಸ್ವಾಮಿ, ಚಂಡಿಕೇಶ್ವರ, ಸುಬ್ರಮಣ್ಯಸ್ವಾಮಿ ಹಾಗೂ ಪಾರ್ವತಿ ಅಮ್ಮನ ರಥಗಳು ಸಾಗುವ ಹಾದಿಯ ಇಕ್ಕೆಲಗಳಲ್ಲಿ ಸೇರಿದ್ದ ಸಾವಿರಾರು ಭಕ್ತರು ಹಣ್ಣು, ದವನ ಎಸೆದು ಭಕ್ತಿ ಭಾವ ಮೆರೆದರು.
ಮೂರು ಗಂಟೆ ವಿಳಂಬ: ಬೆಳಿಗ್ಗೆ 6.40ರ ಮೀನ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಬೇಕಿತ್ತು. ಆದರೆ ಶ್ರೀಕಂಠೇಶ್ವರಸ್ವಾಮಿ 110 ಟನ್ ಭಾರದ ಗೌತಮ ರಥ ಎಳೆಯುವ ವೇಳೆ ಹಗ್ಗ ತುಂಡಾಯಿತು.
ರಥ ಎಳೆಯಲು ಹೊಸ ಹಗ್ಗ ತಂದಿದ್ದರೂ, ಅದನ್ನು ಬಳಸದೆ ಹಳೆಯ ಹಗ್ಗವನ್ನು ಕಟ್ಟಿ ಎಳೆಯಲು ಮುಂದಾದರು. ಭಾರಿ ಗಾತ್ರದ ರಥದ ಚಕ್ರಗಳು ಸ್ವಲ್ಪವೂ ಉರುಳಲಿಲ್ಲ. ಹಗ್ಗ ತುಂಡಾದ ಕಾರಣ ಸರಿಪಡಿಸಿ ಮತ್ತೆ ಪ್ರಯತ್ನಿಸಿದರಾದರೂ ಎರಡನೇ ಬಾರಿಯೂ ಹಗ್ಗ ತುಂಡಾಯಿತು.
ಆ ಬಳಿಕ ಹೊಸ ಹಗ್ಗ ಕಟ್ಟಿ ಮತ್ತೆ ಪ್ರಯತ್ನ ನಡೆಯಿತು. ಸಾವಿರಾರು ಭಕ್ತರು ನೆರೆದಿದ್ದ ಕಾರಣ ಹಗ್ಗ ಬದಲಿಸಲು ತುಂಬಾ ಸಮಯ ಹಿಡಿಯಿತು. ರಥವನ್ನು ತಳ್ಳಲು ಎರಡು ಜೆಸಿಬಿ ಬಳಸಲಾಯಿತು. ಕೊನೆಗೂ 9.20ರ ಸುಮಾರಿಗೆ ರಥ ಚಲಿಸಿತು. ಆ ಬಳಿಕ ಎಲ್ಲೂ ನಿಲ್ಲದೆ 1.5 ಕಿ.ಮೀ ದೂರ ಅಡ್ಡಿ ಆತಂಕಗಳಿಲ್ಲದೆ ಸಾಗಿತು. ರಥೋತ್ಸವ ಮುಗಿಯುವಾಗ ಸಮಯ 11.40 ಆಗಿತ್ತು. ಈ ವೇಳೆ ಬಿಸಿಲು ಹೆಚ್ಚಿದ್ದರಿಂದ ಭಕ್ತರು ಬಸವಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.