ಚಿಕ್ಕಮಗಳೂರು: ‘ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಖಾಲಿ ಇಲ್ಲದಿರುವ ಕುರ್ಚಿಗೆ ‘ಟವೆಲ್’ ಹಾಕಲು ಕೆಲವರು (ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್) ಕಿತ್ತಾಟದಲ್ಲಿ ತೊಡಗಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕುಹಕವಾಡಿದರು.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಟವೆಲ್ನಿಂದ ಅವರು ಗಾಳಿ ಬೀಸಿಕೊಳ್ಳಬಹುದು ಅಷ್ಟೆ. ಸಿದ್ದರಾಮಯ್ಯ ಅವರ ಶೈಲಿಯಲ್ಲೇ ಹೇಳಬೇಕು ಎಂದರೆ ಅಪ್ಪನಾಣೆ ಅವರು ಸಿ.ಎಂ ಆಗಲ್ಲ ಎಂದು ಹೇಳಬಹುದು’ ಎಂದು ವ್ಯಂಗ್ಯವಾಡಿದರು.
‘ಬಿಜೆಪಿ ಅಧಿಕಾರ ಹಿಡಿದರೆ ಯಡಿಯೂರಪ್ಪ ಅವರ ಮನೆಯಲ್ಲಿ ‘ವಾಚ್ಮನ್’ ಆಗುತ್ತೇನೆ ಎಂದು ಜಮೀರ್ ಅಹಮದ್ ಹೇಳಿದ್ದರು. ಆ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು. ಜಮೀರ್ ಅವರು ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಅವರಿಗೆ ಬಕೆಟ್ ಹಿಡಿದು ರಾಜಕಾರಣ ಮಾಡುತ್ತಾರೆ’ ಎಂದು ಲೇವಡಿ ಮಾಡಿದರು.
‘ಜಾತಿ ಪ್ರಚೋದಿಸಿ ರಾಜಕಾರಣ ಮಾಡುವ ಷಡ್ಯಂತ್ರ ನಡೆಯುತ್ತಿದೆ, ಇದು ಸರಿಯಲ್ಲ. ಜಾತಿ ಸಂಖ್ಯಾಬಲ ಜಾಸ್ತಿ ಇದೆ ಎಂದು ಹೇಳಿದ್ದಾರೆ, ಅಲ್ಪಸಂಖ್ಯಾತರೂ ಎಂದೂ ಹೇಳುತ್ತಾರೆ. ಎರಡೂ ಆಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.