ADVERTISEMENT

ಶೈಕ್ಷಣಿಕ ನಗರಗಳಲ್ಲಿ ಹಾಸ್ಟೆಲ್‌ ನಿರ್ಮಾಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 13 ಮೇ 2022, 22:30 IST
Last Updated 13 ಮೇ 2022, 22:30 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಅಥಣಿ ಬ್ರ್ಯಾಂಡ್‌’ನ ಚಪ್ಪಲಿಗಳನ್ನು ಬಿಡುಗಡೆ ಮಾಡಿದರು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವ ಗೋವಿಂದ ಕಾರಜೋಳ, ಮಾದಾರ ಚನ್ನಯ್ಯ ಸ್ವಾಮೀಜಿ, ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್‌.ಲಿಂಗಣ್ಣ, ವ್ಯವಸ್ಥಾಪಕ ನಿರ್ದೇಶಕ ಎಚ್.ನಟರಾಜ್ ಇದ್ದಾರೆ –ಪ್ರಜಾವಾಣಿ ಚಿತ್ರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಅಥಣಿ ಬ್ರ್ಯಾಂಡ್‌’ನ ಚಪ್ಪಲಿಗಳನ್ನು ಬಿಡುಗಡೆ ಮಾಡಿದರು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವ ಗೋವಿಂದ ಕಾರಜೋಳ, ಮಾದಾರ ಚನ್ನಯ್ಯ ಸ್ವಾಮೀಜಿ, ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್‌.ಲಿಂಗಣ್ಣ, ವ್ಯವಸ್ಥಾಪಕ ನಿರ್ದೇಶಕ ಎಚ್.ನಟರಾಜ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆಬೆಳಗಾವಿ, ಕಲಬುರಗಿ, ಧಾರವಾಡ, ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಶೈಕ್ಷಣಿಕ ‌ನಗರಗಳಲ್ಲಿ1 ಸಾವಿರ ಮಂದಿ ಸಾಮರ್ಥ್ಯದ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ಅರಮನೆ ಮೈದಾನದಲ್ಲಿ ಇದೇ 17ರವರೆಗೆ ಆಯೋಜಿಸಿರುವ ‘ಚರ್ಮ ಕುಶಲಕರ್ಮಿಗಳ ಸಮಾವೇಶ, ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ’ಕ್ಕೆ ಶುಕ್ರವಾರ ಚಾಲನೆ ನೀಡಿದರು.

‘ರೈತರಿಗೆ ಅಗತ್ಯವಿರುವ ಹಗ್ಗ, ಬಾರುಕೋಲು ಸೇರಿದಂತೆ ಹಲವು ವಸ್ತುಗಳನ್ನು ಚರ್ಮ ಕುಶಲಕರ್ಮಿಗಳು ತಯಾರಿಸುತ್ತಾರೆ. ಇವರು ಈಗಿನ ಸ್ಥಿತಿಯಲ್ಲೇ ಮುಂದುವರಿದರೆ ಅಭಿವೃದ್ಧಿ ಸಾಧ್ಯವಿಲ್ಲ. ಆಧುನಿಕ ತಾಂತ್ರಿಕತೆ ಮೂಲಕ ಉತ್ಪನ್ನಗಳ ಉತ್ಪಾದನೆ ಹೆಚ್ಚಾಗಬೇಕು. ಈ ಸಮುದಾಯದ ಮಕ್ಕಳೂ ಉನ್ನತ ಶಿಕ್ಷಣ ಪಡೆದು ಸಮಾಜವನ್ನು ಮುನ್ನಡೆಸಬೇಕು’ ಎಂದರು.

ADVERTISEMENT

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ,‘ರಾಜ್ಯದಲ್ಲಿ ಚರ್ಮ ಕೈಗಾರಿಕೆಯನ್ನೇ ಕುಲಕಸುಬಾಗಿ ನಂಬಿಕೊಂಡಿರುವ 50 ಸಾವಿರ ಕುಟುಂಬಗಳಿವೆ. ರಾಜ್ಯದಾದ್ಯಂತಚರ್ಮ ಕುಟೀರಗಳ ಸ್ಥಾಪನೆಗೆ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ‘ಸ್ವಯಂ ಉದ್ಯೋಗ ಮಾಡುವ ಯುವಕರಿಗೆ ಸರ್ಕಾರ ಆರ್ಥಿಕವಾಗಿ ನೆರವಾಗುತ್ತಿದೆ. ನಿರುದ್ಯೋಗಿಯಾಗಿ ಅಲೆಯುವ ಬದಲು ಇಂತಹ ಉದ್ಯೋಗಗಳಲ್ಲಿ ತೊಡಗಿ’ ಎಂದರು.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ‘ಚರ್ಮ ಕೈಗಾರಿಕೆಯನ್ನು ಚಮ್ಮಾರ ಅಥವಾ ಮಾದಿಗ ಸಮುದಾಯವರೇ ಮಾಡಬೇಕು. ಆದರೆ, ಪ್ರಸ್ತುತ ಬೇರೆಯವರ ಕೈಯಲ್ಲಿದೆ. ಚರ್ಮ ಕುಶಲಕರ್ಮಿಗಳು ಮುಂದೆ ಮನೆಯಲ್ಲೇ ಉದ್ಯಮ ನಡೆಸಲು ಸಾಲ ಸೌಲಭ್ಯ, ತರಬೇತಿ, ತಾಂತ್ರಿಕ ಮತ್ತುಮಾರುಕಟ್ಟೆ ನೆರವಿನ ಅಗತ್ಯವಿದೆ’ ಎಂದರು.

ಕಾರ್ಯಕ್ರಮದಲ್ಲಿ ‘ಅಥಣಿ’ ಬ್ರ್ಯಾಂಡ್‌ನ ಚಪ್ಪಲಿಗಳನ್ನು ಅನಾವರಣಗೊಳಿಸಲಾಯಿತು. ಅಲ್ಲಿದ್ದ ನೂರಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಜನ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.