ಹೊಸಪೇಟೆ: ಅನೈತಿಕ ಸಂಬಂಧ ಹೊಂದಿದ ವ್ಯಕ್ತಿಯ ಜತೆ ಸೇರಿಕೊಂಡು ಗಂಡನನ್ನು ಕೊಲೆ ಮಾಡಿರುವ ಸವಿತಾಬಾಯಿ, ಚನ್ನಪ್ಪ ಮಲ್ಲೇಶಪ್ಪ ಎಂಬುವರಿಗೆ ಇಲ್ಲಿನ ಮೂರನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಜಶೇಖರ್ ಅವರು ಜೀವಾವಧಿ ಕಠಿಣ ಶಿಕ್ಷೆ, ತಲಾ ₹30,000 ದಂಡ ವಿಧಿಸಿ ಮಂಗಳವಾರ ಆದೇಶ ನೀಡಿದ್ದಾರೆ.
‘ಕೂಡ್ಲಿಗಿ ಗ್ರಾಮದ ಚಿಕ್ಕಜೋಗಿಹಳ್ಳಿ ಗ್ರಾಮದಸವಿತಾಬಾಯಿ ಹಾಗೂ ಚನ್ನಪ್ಪ ನಡುವೆ ಅನೈತಿಕ ಸಂಬಂಧವಿತ್ತು. ಈ ವಿಷಯ ಸವಿತಾಬಾಯಿ ಗಂಡ ಮುದ್ದಪ್ಪ ಅವರಿಗೆ ಗೊತ್ತಾಗಿತ್ತು. ಈ ಕುರಿತು ಮುದ್ದಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. 2014ರ ಜೂನ್ 14ರಂದು ರಾತ್ರಿ 10.30ರ ಸಮಯದಲ್ಲಿ ಮುದ್ದಪ್ಪ ಮಲಗಿದ್ದಾಗ ಸವಿತಾಬಾಯಿ, ಚನ್ನಪ್ಪ ಹಾಗೂ ಮಹಾಬಲೇಶ್ವರಪ್ಪ ಎಂಬುವರು ಸೇರಿಕೊಂಡು, ಕತ್ತು ಹಿಸುಕಿ ಕೊಲೆ ಮಾಡಿದ್ದರು. ನಂತರ ಶವವನ್ನು ಗುಂಡುಮುಣುಗು ಗ್ರಾಮದ ರಸ್ತೆ ಬದಿ ಎಸೆದು, ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಬಿಂಬಿಸಿದ್ದರು’ ಎಂದು ಸರ್ಕಾರಿ ಅಭಿಯೋಜಕ ಎಂ.ಬಿ. ಸುಂಕಣ್ಣ ತಿಳಿಸಿದರು.
‘ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನ್ಯಾಯಾಲಯವು 44 ಜನ ಸಾಕ್ಷಿದಾರರ ವಿಚಾರಣೆ ನಡೆಸಿ ಈ ಆದೇಶ ನೀಡಿದೆ..ಮಹಾಬಲೇಶ್ವರಪ್ಪ ಈಗಾಗಲೇ ಮೃತಪಟ್ಟಿದ್ದರಿಂದ ಇನ್ನುಳಿದ ಇಬ್ಬರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.