
ಬೆಂಗಳೂರು: ‘ಲಿಂಗಾಯತ ಮತ್ತು ಗಾಣಿಗ ಎಂಬುದು ಕಾನೂನಿನಲ್ಲಿ ಪರಸ್ಪರ ಪ್ರತ್ಯೇಕ ಗುರುತುಗಳಲ್ಲ’ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.
ಪೊಲೀಸ್ ಸಬ್-ಇನ್ಸ್ಪೆಕ್ಟರ್ ಹುದ್ದೆಯ ತಕರಾರಿಗೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು 2015ರಲ್ಲಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸದ್ಯ ಮೈಸೂರು ವೃತ್ತದಲ್ಲಿ ಪೊಲೀಸ್ ಕಾನ್ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಟಿ.ನರಸೀಪುರ ತಾಲ್ಲೂಕಿನ ಅಳಗುಡು ಗ್ರಾಮದ ಟಿ.ಎನ್.ಜಗದೀಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ರಿಟ್ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಪ್ರಕರಣದ ಪ್ರತಿವಾದಿಯಾಗಿರುವ ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ಗ್ರಾಮದ ರಾಜಕುಮಾರ್ ವೈ. ಬೀಳಗಿ ಇತರೆ ಹಿಂದುಳಿದ ವರ್ಗ II-ಎ ಅಡಿಯಲ್ಲಿ ಗಾಣಿಗ ಸಮುದಾಯಕ್ಕೆ ಸೇರಿದವರು ಎಂಬ ತಮ್ಮ ಗುರುತನ್ನು ಸಾಬೀತುಪಡಿಸಿದ್ದಾರೆ’ ಎಂದು ಉಲ್ಲೇಖಿಸಿದೆ.
ಲಿಂಗಾಯತ-ಗಾಣಿಗ ಪಂಗಡಕ್ಕೆ ಸೇರಿದ ರಾಜಕುಮಾರ್ ವೈ. ಬೀಳಗಿ ಅವರು ವರ್ಗ 2ಎ ಅಡಿಯಲ್ಲಿ ಪಡೆದಿರುವ ಪ್ರಯೋಜನದ ನೇಮಕಾತಿ ಸಿಂಧುತ್ವವನ್ನು ಎತ್ತಿಹಿಡಿದಿರುವ ನ್ಯಾಯಪೀಠ, ‘ಲಿಂಗಾಯತ’ ಮತ್ತು ‘ಗಾಣಿಗ’ ಎಂಬುದು ಕಾನೂನಿನ ಅಡಿಯಲ್ಲಿ ಪರಸ್ಪರ ಪ್ರತ್ಯೇಕ ಗುರುತುಗಳಲ್ಲ ಎಂದು ವಿವರಿಸಿದೆ.
ಪ್ರಕರಣವೇನು?: ಟಿ.ಎನ್.ಜಗದೀಶ್ ಇತರೆ ಹಿಂದುಳಿದ ವರ್ಗಗಳ 2ಎ ವ್ಯಾಪ್ತಿಗೆ ಒಳಪಡುವ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿದ್ದು 1998ರಲ್ಲಿ ಪೊಲೀಸ್ ಕಾನ್ಸ್ಟೆಬಲ್ ಆಗಿ ನೇಮಕಗೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಟಿ.ಎನ್.ಜಗದೀಶ್ ಮತ್ತು ರಾಜಕುಮಾರ್ ವೈ. ಬೀಳಗಿ ಇಬ್ಬರೂ 2009ರಲ್ಲಿ ಕರೆಯಲಾಗಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ (ಪಿಎಸ್ಐ) ಅರ್ಜಿ ಸಲ್ಲಿಸಿದ್ದರು. 2010–11ರಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಈ ವೇಳೆ ರಾಜಕುಮಾರ್ ವೈ.ಬೀಳಗಿ ಇತರೆ ಹಿಂದುಳಿದ ವರ್ಗಗಳ 2ಎ ಅಡಿಯಲ್ಲಿ ಪ್ರಯೋಜನ ಪಡೆದು ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದರು. ಇದನ್ನು ಜಗದೀಶ್ ಆಕ್ಷೇಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.