ಬಸವರಾಜ ಬೊಮ್ಮಾಯಿ
ಬೆಂಗಳೂರು: ‘ವೀರಶೈವ ಲಿಂಗಾಯತರ ಧರ್ಮ ಮತ್ತು ಜಾತಿಯ ವಿಚಾರದಲ್ಲಿ ವೀರಶೈವ– ಲಿಂಗಾಯತ ಮಹಾಸಭಾವು ಅನಗತ್ಯ ಗೊಂದಲ ಮೂಡಿಸುತ್ತಿದೆ’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಒಂದು ಕಡೆ ಹೊಸ ಧರ್ಮ ಎನ್ನುತ್ತಾರೆ. ಒಂದೆಡೆ ವೀರಶೈವ ಧರ್ಮ, ಇನ್ನೊಂದೆಡೆ ಲಿಂಗಾಯತ ಧರ್ಮ, ಮತ್ತೊಂದೆಡೆ ವೀರಶೈವ ಲಿಂಗಾಯತ ಧರ್ಮ ಎನ್ನುತ್ತಾರೆ. ಕಾಂಗ್ರೆಸ್ ನಾಯಕರೇ ತುಂಬಿರುವ ಮಹಾಸಭಾವು ಇಂತಹ ಗೊಂದಲ ಸೃಷ್ಟಿಸುತ್ತಿದೆ. ಜನರು ಯಾವುದು ಸರಿ ಎಂದು ತಿಳಿಯಬೇಕು’ ಎಂದು ಪ್ರಶ್ನಿಸಿದರು.
‘ಸಂವಿಧಾನ ಬದ್ಧವಾಗಿ, ಕಾನೂನು ಬದ್ಧವಾಗಿ ಇರುವ ಧರ್ಮದ ಹೆಸರನ್ನಷ್ಟೇ ಬರೆಯಿಸಬೇಕು. ಜನರು ತಾವು ಯಾರು ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ನೀವು ಅನಗತ್ಯವಾಗಿ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಸ್ಐಟಿ ಮಧ್ಯಂತರ ವರದಿ ನೀಡಲಿ:
‘ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ಮಾಡಿದವರನ್ನು ಮುಟ್ಟದಂತೆ ಎಸ್ಐಟಿ ಮೇಲೆ ರಾಜಕೀಯ ಒತ್ತಡ ಇದೆ. ನಿರೀಕ್ಷೆಗೆ ತಕ್ಕಂತೆ ಎಸ್ಐಟಿ ತನಿಖೆ ನಡೆಯುತಿಲ್ಲ’ ಬಸವರಾಜ ಬೊಮ್ಮಾಯಿ ಆರೋಪಿಸಿದರು.
‘ಮಾಸ್ಕ್ ಮ್ಯಾನ್ನ ದೂರು ಹುಸಿಯಾದ ನಂತರ ಬೇರೆ ಬೇರೆ ದೂರುಗಳು ದಾಖಲಾಗುತ್ತಿವೆ. ಎಸ್ಐಟಿಗೆ ಉತ್ತರದಾಯಿತ್ವ ಮತ್ತು ಜವಾಬ್ದಾರಿ ಇದೆ. ಇದುವರೆಗೆ ಆಗಿರುವ ತನಿಖೆ ಬಗ್ಗೆ ಎಸ್ಐಟಿಯು ಮಧ್ಯಂತರ ವರದಿ ನೀಡಬೇಕು’ ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.