ADVERTISEMENT

ಮಿಡತೆಗಳ ನಿಗ್ರಹಕ್ಕೆ ಆಧುನಿಕ ಯುದ್ಧ ತಂತ್ರ

ರಾತ್ರಿ ವೇಳೆ ಕೀಟನಾಶಕ ಸಿಂಪಡಣೆ ಅಗತ್ಯ

ಎಂ.ಜಿ.ಬಾಲಕೃಷ್ಣ
Published 29 ಮೇ 2020, 14:15 IST
Last Updated 29 ಮೇ 2020, 14:15 IST
ಡಾ,.ಎ.ಆರ್‌.ವಿ.ಕುಮಾರ್‌
ಡಾ,.ಎ.ಆರ್‌.ವಿ.ಕುಮಾರ್‌   

ಬೆಂಗಳೂರು: ಮಹಾರಾಷ್ಟ್ರದ ಅಮರಾವತಿ, ಭಂಡಾರಾದತ್ತ ಬಂದಿರುವ ಮಿಡತೆಗಳ ಸಮೂಹ ಒಂದು ವೇಳೆ ರಾಜ್ಯಕ್ಕೂ ಬಂದರೆ ಆಧುನಿಕ ಯುದ್ಧ ತಂತ್ರ ಅಂದರೆ ರಾತ್ರಿ ವೇಳೆ ಕೀಟನಾಶಕ ಸಿಂಪಡಣೆ ಮಾಡುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲವಾಗಿದೆ.

ಮರುಭೂವಿಯಲ್ಲಿ ಪ್ರದೇಶಗಳಲ್ಲಿ ವೃದ್ಧಿಗೊಳ್ಳುವ ಮಿಡತೆ ಇದಾಗಿದ್ದು, ಕಳೆದ ವರ್ಷ ರಾಜಸ್ಥಾನದಲ್ಲಿ ಉತ್ತಮ ಮಳೆ ಸುರಿದುದರಿಂದ ಮಿಡತೆಗಳ ಸಂತಾನ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಆಹಾರ ಅರಸಿ ವಲಸೆ ಹೊರಟಿರುವ ‌ಈ ಮಿಡತೆಗಳು ಮೂರು ವರ್ಷ ಸಂಚಾರದಲ್ಲಿದ್ದು, ಬಳಿಕ ಮತ್ತೆ ಮರುಭೂಮಿಗೇ ಹೋಗುತ್ತವೆ. ವಲಸೆ ದಾರಿಯಲ್ಲಿ ಅವುಗಳ ಪ್ರಮಾಣ ಕ್ಷೀಣಿಸಿದರೆ ತಮ್ಮ ಊರು ಸೇರದೆಯೂ ಇರಬಹುದು.

‘ಕ್ಲೊರೊಪೈರಿಪಾಸ್ ಮತ್ತು ಲಾಮ್ಡಾಸಹಲೋಥ್ರಿನ್‌ ಕೀಟನಾಶಕಗಳು ಈ ಮಿಡತೆ ಸಂಹಾರಕ್ಕೆ ಪರಿಣಾಮಕಾರಿ. ಈ ಕೀಟನಾಶಕಗಳಿಂದ ಇತರ ಜೀವಿಗಳಿಗೆ ಅಂತಹ ಅಪಾಯ ಇಲ್ಲ ಎಂಬುದು ಗೊತ್ತಾಗಿದೆ. ರಾತ್ರಿ ಹೊತ್ತು ಮರಗಳ ಮೇಲೆ ಇವುಗಳನ್ನು ಸಿಂಪಡಿಸಿದರೆ ಮಿಡತೆಗಳು ಅಲ್ಲೇ ಸಾಯುತ್ತವೆ. ಮಹಾರಾಷ್ಟ್ರದಲ್ಲಿ ಇದು ಸಾಬೀತಾಗಿದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರಜ್ಞ ಡಾ.ಎ.ಆರ್.ವಿ.ಕುಮಾರ್‌ ಹೇಳಿದರು.

ADVERTISEMENT

ವಿಶ್ರಾಂತಿ ಸಮಯದಲ್ಲೇ ಪ್ರಹಾರ: ಹಗಲು ಹೊತ್ತಲ್ಲಿ ಅದರಲ್ಲೂ ಮುಖ್ಯವಾಗಿ ಸಂಜೆ 4ರಿಂದ 7 ಗಂಟೆಯ ಅವಧಿಯಲ್ಲಿ ಮಿಡತೆಗಳು ಹೊಲ, ಗದ್ದೆಗಳಿಗೆ ದಾಳಿ ಮಾಡಿ ಹಸಿರು ಎಲೆ ತಿನ್ನುತ್ತವೆ. 7ರ ಬಳಿಕ ಮರಗಳ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತವೆ. ಅವುಗಳನ್ನು ಕೊಲ್ಲಬೇಕಿದ್ದರೆ ರಾತ್ರಿಯೇ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಡ್ರೋಣ್‌, ಟ್ರಾಕ್ಟರ್‌ನಲ್ಲಿ ಅಳವಡಿಸಲಾದ ಜೆಟ್‌ ಸ್ಟ್ರೇಯರ್ಗಳ ಮೂಲಕ ಮರಗಳ ಮೇಲೆ ಕೀಟನಾಶಕ ಸಿಂಪ‍ಡಿಸಬೇಕಾಗುತ್ತದೆ.

‘ಆರಂಭದಲ್ಲಿ 10 ಕಿ.ಮೀ. ಉದ್ದ, 2 ಕಿ.ಮೀ. ಅಗಲವಾಗಿ ಮಿಡತೆಗಳ ವಲಸೆ ಇತ್ತು. ಇದೀಗ ಅವುಗಳ ಸಂಖ್ಯೆ ಕ್ಷೀಣಿಸಿದೆ. ಹವಾಮಾನ ವೈಪರೀತ್ಯದಿಂದ ದಕ್ಷಿಣದತ್ತ ಗಾಳಿ ಬೀಸಿದರೆ ಅವುಗಳು ರಾಜ್ಯಕ್ಕೂ ಬರಲಾರವು ಎಂದು ಹೇಳಲಾಗದು. ಆದರೆ ಸದ್ಯ ಅಂತಹ ಸಾಧ್ಯತೆ ಕಡಿಮೆ ಇದೆ. ಪ್ರತಿಯೊಂದು ರಾಜ್ಯವೂ ಒಂದಿಷ್ಟು ಎಚ್ಚರಿಕೆ ವಹಿಸಿದರೆ ಮಿಡತೆಗಳ ಸಂತಾನವನ್ನು ಬೇಗ ನಾಶಪಡಿಸುವುದು ಸಾಧ್ಯವಿದೆ’ ಎಂದು ಕುಮಾರ್ ವಿವರಿಸಿದರು.

ಭಾರತ–ಪಾಕಿಸ್ತಾನ ಬಿಕ್ಕಟ್ಟಿನ ಫಲ

‘ಮಿಡತೆಗಳ ಹಾವಳಿ ನಿಯಂತ್ರಣಕ್ಕಾಗಿ ರಾಜಸ್ಥಾನದ ಜೋಧಪುರ ಮತ್ತು ಪಾಕಿಸ್ತಾನದ ಕರಾಚಿಗಳಲ್ಲಿ ಸಮನ್ವಯ ಕೇಂದ್ರಗಳಿವೆ. ಮಿಡತೆಗಳ ಸಂತಾನ ಹೆಚ್ಚಾದಾಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಕೆಲಸ ನಡೆಯುತ್ತದೆ. ಆದರೆ ಈ ಬಾರಿ ಉಭಯ ದೇಶಗಳ ನಡುವೆ ಬಿಕ್ಕಟ್ಟು ನೆಲೆಸಿರುವುದರಿಂದ ಮಿಡತೆ ಸಮನ್ವಯ ಸಮರ್ಪಕವಾಗಿ ಆಗಲಿಲ್ಲ. ಹೀಗಾಗಿ ವೃದ್ಧಿಸಿದ ಮಿಡತೆಗಳ ಸಂಹಾರ ಆಗಲಿಲ್ಲ. ಇವುಗಳು ಇದೀಗ ಎರಡೂ ದೇಶಗಳತ್ತ ವಲಸೆ ಹೋಗಿ ಬೆಳೆ ನಾಶ ಮಾಡತೊಡಗಿವೆ’ ಎನ್ನುತ್ತಾರೆ ಡಾ.ಎ.ಆರ್‌.ವಿ.ಕುಮಾರ್‌.

ಗಾಳಿಯೇ ನಿರ್ಣಾಯಕ

ಕೇವಲ ಎರಡು ಗ್ರಾಂ ತೂಕದ ಮಿಡತೆಗಳು ಗಾಳಿಯ ವಿರುದ್ಧ ಸಂಚರಿಸುವ ತಾಕತ್ತು ಪಡೆದಿಲ್ಲ. ಗಾಳಿ ಬೀಸಿದತ್ತ ಚಲಿಸುವ ಸ್ವಭಾವ ಇವುಗಳದು. ಮುಂಗಾರು ಮಳೆಯ ಆರಂಭದಲ್ಲಿ ಇವುಗಳು ದಕ್ಷಿಣ ಭಾರತದತ್ತ ವಲಸೆ ಬರಲು ಹೊರಟಿದ್ದು ಆಪತ್ಕಾಲದಲ್ಲೂ ವರದಾನ. ಇದೀಗ ನೈರುತ್ಯ ಮುಂಗಾರು ಮಾರುತಗಳು ಈಶಾನ್ಯ ದಿಕ್ಕಿನತ್ತ ಬೀಸುವ ಸಮಯವಾಗಿದ್ದು, ಕರ್ನಾಟಕದ ಮಟ್ಟಿಗೆ ಪ್ರಕೃತಿಯೇ ಮಿಡತೆಗಳಿಗೆ ತಡೆಗೋಡೆಯಾಗುವ ಆಶಾಭಾವನೆ ಇದೆ.

ಮಿಡತೆಗಳು ಲಕ್ಷಾಂತರ ವರ್ಷಗಳಿಂದಲೂ ಮರುಭೂಮಿ ಪ್ರದೇಶಗಳಲ್ಲಿವೆ. ಉತ್ತಮ ಮಳೆ ಬಿದ್ದು ಅವುಗಳ ಸಂತಾನ ಜಾಸ್ತಿಯಾದಾಗ ಆಹಾರ ಅರಸಿ ವಲಸೆ ಹೊರಡುತ್ತವೆ ಎಂದು ಕೀಟಶಾಸ್ತ್ರಜ್ಞ ಡಾ.ಎ.ಆರ್.ವಿ.ಕುಮಾರ್ ಹೇಳಿದ್ದಾರೆ.

* ಈ ಮಿಡತೆಗಳು ರಾಜಸ್ಥಾನದ ಮರುಭೂಮಿ ಪ್ರದೇಶದ ಕಾಯಂ ನಿವಾಸಿಗಳು

* 1812, 1923 ಮತ್ತು 1997ರಲ್ಲಿ ರಾಜ್ಯದಲ್ಲಿ ಕಾಣಿಸಿಕೊಂಡಿದ್ದವು

* ರಾಜಸ್ಥಾನದಿಂದ ಹೊರಟಿದ್ದಾಗ ಹಿಂಡಿನಲ್ಲಿದ್ದ ಮಿಡತೆಗಳ ಸಂಖ್ಯೆ ಅಂದಾಜು 8 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.