ADVERTISEMENT

ಸುಡು ಬಿಸಿಲಲ್ಲಿ ಸೈಕಲ್‌ ತುಳಿತ

ಮತದಾನ ಅರಿವಿಗೆ ಮುಂದಾದ 73 ವರ್ಷದ ಉಮಾಪತಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 19:10 IST
Last Updated 17 ಏಪ್ರಿಲ್ 2019, 19:10 IST
ಉಮಾಪತಿ ಮೂದಲಿಯಾರ್‌, ಮತದಾನದ ಜಾಗೃತಿ ಜಾಥ ನಡೆಸಿದರು
ಉಮಾಪತಿ ಮೂದಲಿಯಾರ್‌, ಮತದಾನದ ಜಾಗೃತಿ ಜಾಥ ನಡೆಸಿದರು   

ಸಕಲೇಶಪುರ: ಅರಸೀಕೆರೆ ತಾಲ್ಲೂಕಿನ ಮಾಲೇಕಲ್ಲು ತಿರುಪತಿ ನಿವಾಸಿ 73 ವರ್ಷದ ಉಮಾಪತಿ ಮೊದಲಿಯಾರ್ ಮತದಾನ ಜಾಗೃತಿಗಾಗಿ ಚಿಕ್ಕಮಗಳೂರಿನಿಂದ ದಕ್ಷಿಣ ಕನ್ನಡ, ಬೆಂಗಳೂರು ವರೆಗೆ ನೆತ್ತಿ ಸುಡುವ ಬಿಸಿಲಿನಲ್ಲಿ ಸೈಕಲ್ ಜಾಥಾ ನಡೆಸುತ್ತಿದ್ದಾರೆ.

ಮಾರ್ಚ್‌ 25ರಂದು ಚಿಕ್ಕಮಗಳೂರಿನಿಂದ ಹೊರಟು, ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿಘಾಟ್‍ ಮಾರ್ಗವಾಗಿ ಧರ್ಮಸ್ಥಳ, ಬೆಳ್ತಂಗಡಿ, ಮಂಗಳೂರು, ಬಂಟ್ವಾಳ, ಗುಂಡ್ಯಾ ಭಾಗದಲ್ಲಿ ಜಾಗೃತಿ ಮೂಡಿಸಿದ್ದಾರೆ. ಶಿರಾಡಿ ಘಾಟ್‍ ಮಾರ್ಗವಾಗಿ ಸಕಲೇಶಪುರಕ್ಕೆ ಬುಧವಾರ ಮಧ್ಯಾಹ್ನ ಆಗಮಿಸಿದರು.

ತಾಲ್ಲೂಕಿನ ಹೆಗ್ಗದ್ದೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ವಿನಂತಿ ಮಾಡಿಕೊಂಡರು. ನಂತರ ಪಟ್ಟಣದ ಸೆಸ್ಕ್‌ ಕಚೇರಿ ಆವರಣ, ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆ ಸಮೀಪದ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಿ ಜಾಗೃತಿ ಅಭಿಯಾನ ನಡೆಸಿದರು.

ADVERTISEMENT

ಇವರ ಸೈಕಲ್‍ನಲ್ಲಿ ‘ಶತ ಪ್ರತಿಶತಃ ಮತದಾನ’ ಎಂಬ ಘೋಷಣೆಯನ್ನು ಬರೆದುಕೊಂಡಿದ್ದಾರೆ. ಉಮಾಪತಿಯವರು ಈವರೆಗೆ ಏಕಾಂಗಿಯಾಗಿ ಸೈಕಲ್‍ ತುಳಿಯುತ್ತಲೇ ಹಲವು ಜಾಗೃತಿ ಅಭಿಯಾನಗಳನ್ನು ಮಾಡಿದ್ದಾರೆ. 11 ರಾಜ್ಯಗಳನ್ನು ಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.