ಕರ್ನಾಟಕ ಲೋಕಾಯುಕ್ತ
ಬೆಂಗಳೂರು: ಬಳ್ಳಾರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡೆಂಟ್ ಎಂಜಿನಿಯರ್ ಅಮಿನ್ ಮುಕ್ತರ್ ಅಹಮದ್ ಹೆಸರಿನಲ್ಲಿ 31 ನಿವೇಶನ, ಲೋಕೋಪಯೋಗಿ ಉತ್ತರ ವಲಯದ ಸಂಪರ್ಕ ಮತ್ತು ಕಟ್ಟಡ ವಿಭಾಗದ ಮುಖ್ಯ ಎಂಜಿನಿಯರ್ ಎಚ್.ಸುರೇಶ್ ಮತ್ತು ಕುಟುಂಬದವರ ಹೆಸರಿನಲ್ಲಿ 6 ವಾಣಿಜ್ಯ ಸಂಕೀರ್ಣಗಳು...
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿರುವ ಆಸ್ತಿಗಳಲ್ಲಿ ಕೆಲ ವಿವರಗಳಿವು.
ಈ ಇಬ್ಬರೂ ಸೇರಿ ಒಟ್ಟು ಏಳು ಅಧಿಕಾರಿಗಳಿಗೆ ಸೇರಿದ ಒಟ್ಟು 33 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಶನಿವಾರ ಬೆಳಿಗ್ಗೆಯೇ ದಾಳಿ ನಡೆಸಿ, ಶೋಧ ಕಾರ್ಯ ಆರಂಭಿಸಿದ್ದರು. ಲೋಕಾಯುಕ್ತ ಪೊಲೀಸರು, ಏಳೂ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಿಂದ ₹17.92 ಕೋಟಿ ಮೌಲ್ಯದ ಸ್ಥಿರಾಸ್ತಿ, ₹2.24ಕೋಟಿ ಮೌಲ್ಯದ ಚಿನ್ನಾಭರಣಗಳು ಸೇರಿ ಒಟ್ಟು ₹24.47 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ.
ಅಮಿನ್ ಮುಕ್ತರ್ ಅಹಮದ್ ಅವರಿಗೆ ಸೇರಿದ 5 ಸ್ಥಳಗಳಲ್ಲಿ ಶೋಧ ನಡೆಸಲಾಯಿತು. ಅಮಿನ್ ಮತ್ತು ಅವರ ಕುಟುಂಬದವರ ಹೆಸರಿನಲ್ಲಿ ಒಟ್ಟು ನಿವೇಶನಗಳೂ ಸೇರಿ ₹5.71 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಶನಿವಾರದ ದಾಳಿಯಲ್ಲಿ ಅತಿಹೆಚ್ಚು ಆಸ್ತಿ (₹7.32 ಕೋಟಿ) ಪತ್ತೆಯಾಗಿದ್ದೂ ಅಮಿನ್ ಅವರ ಬಳಿಯಲ್ಲೇ.
ಎಚ್.ಸುರೇಶ್ ಅವರಿಗೆ ಶನಿವಾರ ನಿವೃತ್ತಿಯ ದಿನವಾಗಿತ್ತು. ಇದಕ್ಕಾಗಿ ಅವರ ಸಹೋದ್ಯೋಗಿಗಳು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ಆದರೆ ಅವರ ಮನೆಗೆ ಬೆಳಿಗ್ಗೆಯೇ ಬಂದ ಲೋಕಾಯುಕ್ತ ಪೊಲೀಸರು, ಶೋಧ ಕಾರ್ಯ ಆರಂಭಿಸಿದರು. 6 ವಾಣಿಜ್ಯ ಸಂಕೀರ್ಣಗಳು, 2 ಮನೆ, 2 ನಿವೇಶನ, ₹1.65 ಕೋಟಿ ಮೊತ್ತದ ಬ್ಯಾಂಕ್ ಠೇವಣಿಗಳು ಪತ್ತೆಯಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.