ADVERTISEMENT

ಲೋಕಸಭೆ, ವಿಧಾನಸಭೆ ಚುನಾವಣೆಗೆ ವ್ಯತ್ಯಾಸವಿದೆ: ಎಂ.ಬಿ. ಪಾಟೀಲ 

​ಪ್ರಜಾವಾಣಿ ವಾರ್ತೆ
Published 27 ಮೇ 2019, 9:28 IST
Last Updated 27 ಮೇ 2019, 9:28 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಬೆಂಗಳೂರು: ಲೋಕಸಭೆ, ವಿಧಾನಸಭೆ ಚುನಾವಣೆಗೆ ವ್ಯತ್ಯಾಸವಿದೆ. ತತ್ವ, ಪುಲ್ವಾಮ ದಾಳಿ ಸೇರಿ ಇತರ ವಿಷಯಗಳು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯಶಸ್ವಿಗೆ ಕಾರಣವಾದವು ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೋಲಿಗೆ ಯಾವುದೇ ಕಾರಣಗಳಿರಬಹುದು. ಆದರೆ, ಜನರ ತೀರ್ಪನ್ನು ನಾವು ಒಪ್ಪಿಕೊಳ್ಳಬೇಕು. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜಸ್ಥಾನ ಸೇರಿ ಇತರ ಕಡೆಗಳಲ್ಲೂ ಸೋಲಾಗಿದೆ. ಮೈತ್ರಿ ಸರ್ಕಾರಕ್ಕೇನು ಅಪಾಯವಿಲ್ಲ' ಎಂದು ಹೇಳಿದರು.

ಎಸ್.ಎಂ. ಕೃಷ್ಣ ನಮ್ಮ ನಾಯಕರಾಗಿದ್ದರು. ರಾಜಕೀಯ ಹೊರತುಪಡಿಸಿ ಭೇಟಿ ಮಾಡಿದ್ದಾರೆ. ನನಗೂ ಎಸ್ಎಂಕೆ ಕರೆ ಮಾಡಿ ಮಾತನಾಡಿದ್ದರು. ಹಾಗಂತ ಬೇರೆ ಅರ್ಥ ಕಲ್ಪಿಸೋಕೆ ಸಾಧ್ಯವೇ ಎಂದು ಪ್ರಶ್ನಿಸಿದರು.

ADVERTISEMENT

‘ಬಿಜೆಪಿ ನಾಯಕರು ನನ್ನನ್ನು ಭೇಟಿ ಮಾಡಿದ್ದರು.‌ ಹಾಗಂತ ಅವರು ಕಾಂಗ್ರೆಸ್‌ಗೆ ಬರುತ್ತಾರೆ ಅಂತ ಅರ್ಥವೇ. ಎಲ್ಲವೂ ಊಹಾಪೋಹ’ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಎಂ.ಬಿ.ಪಾಟೀಲ ಹೆಸರು ಪ್ರಸ್ತಾಪ...
‘ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿದ್ದಾರೆ. ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಸುಮ್ಮನೆ ಊಹಾಪೋಹದ ಸುದ್ದಿಗೆ ಉತ್ತರ ಕೊಡಲ್ಲ.‌ ಪ್ರಬಲ ಸಮುದಾಯದ ನಾಯಕ ಅಂತ ಹೇಳಿಕೊಳ್ಳಲ್ಲ. ಹಿಂದೆಯೂ ಅವಕಾಶ ಬಂದಿತ್ತು, ನಾನು ನಿರಾಕರಿಸಿದ್ದೆ.‌ ಈಗ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ. ಅಂದರೆ ಮತ್ತೇಕೆ ಈ ವಿಷಯ ಎಂದು ಪಾಟೀಲ ಪ್ರಶ್ನಿಸಿದರು.

ಆಪರೇಷನ್ ಕಮಲದ ಭೀತಿ ಇಲ್ಲ: ದಿನೇಶ್ ಗುಂಡೂರಾವ್ ಹೇಳಿಕೆ
ಆಪರೇಷನ್ ಕಮಲದ ಬಗ್ಗೆ ನಮಗೆ ಯಾವುದೇ ಭೀತಿ ಇಲ್ಲ. ಕಾಂಗ್ರೆಸ್ ಶಾಸಕರು ಬಿಜೆಪಿ ಹಿರಿಯ ನಾಯಕರ ಮನೆಗೆ ಭೇಟಿ ಕೊಟ್ಟ ವಿಚಾರ.‌ ಈ ಕುರಿತಾಗಿ ತಪ್ಪಾಗಿ ಅರ್ಥ ಮಾಡಿಕೊಳ್ಳುವ ಅಗತ್ಯ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಸಂಪುಟ ಪುನರ್ ರಚನೆ ಕುರಿತಾಗಿ ಚರ್ಚೆ ನಡೆದಿದೆ. ಈ ಕುರಿತಾಗಿ ಸ್ಪಷ್ಟ ನಿರ್ಧಾರಕ್ಕೆ ಇನ್ನೂ ಬಂದಿಲ್ಲ. ಯಾರ್ಯಾರಿಗೆ ಅವಶ್ಯಕತೆ ಇದೆ ಎಂಬುವುದನ್ನು ನೋಡಿ ಮುಂದುವರಿಯಬೇಕು. ಸರ್ಕಾರ ಉರುಳಿಸಲು ಬಿಜೆಪಿ ನಿರಂತರ ಪ್ರಯತ್ನ. ಬಿಜೆಪಿ ಹೇಳಿಕೆಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ ಎಂದು ತಿಳಿಸಿದರು.

ಪಕ್ಷದ ನಾಯಕತ್ವ ಬದಲಾವಣೆ ಕುರಿತಾಗಿಯೂ ಯಾವುದೇ ಚರ್ಚೆ ಇಲ್ಲ.ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಜನರ ಸಮಸ್ಯೆ ಬಗೆಹರಿಸೋ ಕೆಲಸ ನಡೆಯಬೇಕು. ಆ ಕುರಿತಾಗಿ ಹೆಚ್ಚಿನ ಗಮನ ಕೊಡಬೇಕಿದೆ. ಈ ಉದ್ದೇಶಕ್ಕಾಗಿಯೇ 29 ರಂದು ಸಿಎಲ್‌ಪಿ ಸಭೆ ನಡೆಯಲಿದೆ ಎಂದರು.

ಬಿಜೆಪಿ ಆಪರೇಷನ್ ಕಮಲ‌ ಕುರಿತು ಸಚಿವ ಆರ್.ವಿ. ದೇಶಪಾಂಡೆ ಪ್ರತಿಕ್ರಿಯೆ
‘ಬಿಜೆಪಿಯವರಿಗೆ ಈಗ ಹೊಸ ಹುರುಪು ಬಂದಿದೆ. ಅವರು ಆಪರೇಷನ್ ಪ್ರಯತ್ನ ಮಾಡುತಿದ್ದಾರೆ. ಒಂದು ವರ್ಷದಿಂದಲೂ ಮಾಡುತ್ತಲೇ ಇದ್ದಾರೆ.‌ ಸರ್ಕಾರ ಮುಂದುವರಿಯಲಿದೆ. ನಾವು ಆರೋಗ್ಯವಾಗಿದ್ದೇವೆ. ನಮಗೇಕೆ ಆಪರೇಷನ್ ಮಾಡುತ್ತಾರೆ. ಅವರ ಆಪರೇಷನ್ ಏನೂ ಆಗಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.