ಸೊರಬ: ‘ಬಿಜೆಪಿಯ ಅಂಗ ಸಂಸ್ಥೆಗಳಾದ ಆರ್ಎಸ್ಎಸ್ ಹಾಗೂ ಬಜರಂಗದಳ ಈ ದೇಶದ ಜನರು ಕಷ್ಟದಲ್ಲಿದ್ದಾಗ ಹೋರಾಡಿದ ಉದಾಹರಣೆಗಳಿಲ್ಲ. ಆದರೆ, ದ್ವೇಷಕ್ಕಾಗಿ ಧಾರ್ಮಿಕ ಭಾವನೆ ಕೆರಳಿಸಿ ಬಿಜೆಪಿಗೆ ರಾಜಕೀಯ ಲಾಭ ಮಾಡಿಕೊಡಲು ಹೋರಾಟ ಮಾಡುತ್ತಿವೆ’ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಆರೋಪಿಸಿದರು.
ಪಟ್ಟಣದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ಬದುಕು ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುವುದನ್ನು ಬಿಟ್ಟು ಹಿಂದೂಪರ ಸಂಘಟನೆಗಳು ಕೋಮು ಸೌಹಾರ್ದ ಕದಡುವ ಕೆಲಸ ಮಾಡುತ್ತಿವೆ.ಆರ್ಎಸ್ಎಸ್ ಹಾಗೂ ಬಜರಂಗದಳ ಸೇರಿ ಬಿಜೆಪಿ ಪರಿವಾರದ ಸಂಸ್ಥೆಗಳು ಆ ಪಕ್ಷಕ್ಕೆ ಅಧಿಕಾರ ಕೊಡಿಸಲು ತೋರುವ ಬದ್ಧತೆಯನ್ನು ಮತದಾರರ ಬಗ್ಗೆ ತೋರುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಜನರ ಪರವಾಗಿ ಹೋರಾಟ ಮಾಡುವುದಾರೆ ನಾನು ನಿಮ್ಮ ಜೊತೆ ಕೈಜೋಡಿಸುತ್ತೇನೆ. ಕೇವಲ ಅಧಿಕಾರಕ್ಕಾಗಿ ಧರ್ಮಕೇಂದ್ರಿತ ನಿಲುವುಗಳನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ಧರ್ಮ ಹಾಗೂ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಸಾಮರಸ್ಯ ಕದಡಲು ಹೊರಟರೆ ಕಾಂಗ್ರೆಸ್ ಸಹಿಸುವುದಿಲ್ಲ’ ಎಂದು ಎಚ್ಚರಿಸಿದರು.
‘ಕೇಸರೀಕರಣದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವ ವಾಸ್ತವ ಬಿಜೆಪಿಗೆ ಗೊತ್ತಾಗಬೇಕಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನರ ವಿಶ್ವಾಸ ಕಳೆದುಕೊಂಡಿರುವುದನ್ನು ಮರೆಮಾಚಲು ಹಿಜಾಬ್, ಹಲಾಲ್ ಗಲಭೆ ಎಬ್ಬಿಸಿವೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.