ತುಮಕೂರು: ಖಾತೆ ಬದಲಾವಣೆಯಿಂದ ತೀವ್ರ ಅಸಮಾಧಾನಗೊಂಡಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಮತ್ತೆ ಸಣ್ಣ ನೀರಾವರಿ ಖಾತೆ ನೀಡುವ ಮೂಲಕ ಅವರ ಬೇಗುದಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಣಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಪ್ರವಾ ಸೋದ್ಯಮ ಮತ್ತು ಪರಿಸರ ಖಾತೆ ನೀಡಲಾಗಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡು ಮುಖ್ಯಮಂತ್ರಿ ಅವರಿಗೆ ಸೆಡ್ಡು ಹೊಡೆದಿದ್ದರು. ಯಡಿಯೂರಪ್ಪ ಕರೆ ಮಾಡಿ, ಬೆಂಗ ಳೂರಿಗೆ ಬರುವಂತೆ ತಿಳಿಸಿದಾಗ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಬಂದು ರಾಜೀನಾಮೆ ನೀಡುವೆ. ಅಂದು ನನ್ನ ನಿಲುವನ್ನು ಬಹಿರಂಗವಾಗಿ ಪ್ರಕಟಿ ಸುವೆ ಎಂದು ಕಠಿಣವಾಗಿ ನುಡಿದಿದ್ದರು ಎನ್ನಲಾಗಿದೆ.
‘ಸ್ವಾಭಿಮಾನಕ್ಕೆ ಪೆಟ್ಟಾಗಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ, ಶಾಸಕ ನಾಗಿ ಇರುತ್ತೇನೆ’ ಎಂದು ಮಾಧುಸ್ವಾಮಿ ತಮ್ಮ ಆಪ್ತರ ಬಳಿ ಅಸಮಾಧಾನ ಸಹ ವ್ಯಕ್ತಪಡಿಸಿದ್ದರು. ಕೆಲ ಸಚಿವರು ಸೇರಿದಂತೆ ಬಹಳಷ್ಟು ಮಂದಿ ಕರೆ ಮಾಡಿದರೂ ಕೆಲವು ಕರೆಗಳನ್ನು ಮಾತ್ರ ಸ್ವೀಕರಿಸಿದ್ದರು. ಆಪ್ತ ಸಹಾಯಕರಿಗೂ ಕರೆಗಳನ್ನು ಸ್ವೀಕರಿಸದಂತೆ ಸೂಚಿಸಿದ್ದು, ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಯಡಿಯೂರಪ್ಪ ಮತ್ತು ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಸದಸ್ಯರು ಸದನದಲ್ಲಿ ವಾಗ್ದಾಳಿ ನಡೆಸಿದರೆ ಅದಕ್ಕೆ ಮಾಧುಸ್ವಾಮಿ ತಡೆಗೋಡೆ ಆಗು ತ್ತಿದ್ದರು. ಇಂತಹ ಪರಮಾಪ್ತ ಸಚಿವ ಮಾಧುಸ್ವಾಮಿ ಅವರ ನಡೆ ಬಿಎಸ್ವೈ ಅವರಿಗೆ ಬಿಸಿತುಪ್ಪವಾಗಿತ್ತು. ರಾಜೀನಾಮೆ ನೀಡುವುದು ಖಚಿತ ಎಂದೇ ಸಚಿವರ ಬೆಂಬಲಿಗರು ಪ್ರತಿಪಾದಿಸಿದ್ದರು. ಈ ಎಲ್ಲ ಬೆಳವಣಿಗೆ ಗಮನಿಸಿದ ಯಡಿಯೂರಪ್ಪ ಸೋಮ ವಾರ ರಾತ್ರಿ ಮತ್ತೆ ದಿಢೀರ್ ಎಂದು ಅವರ ಖಾತೆ ಬದಲಿಸಿದ್ದಾರೆ. ಮಾಧು ಸ್ವಾಮಿ ಹೆಚ್ಚು ಆಸೆಪಟ್ಟಿದ್ದ ಸಣ್ಣ ನೀರಾ ವರಿ ಖಾತೆಯನ್ನೇ ನೀಡಿದ್ದಾರೆ.
ಮೊದಲ ಬಾರಿ ಖಾತೆ ಬದಲಾವಣೆ ಆದಾಗ ಸಣ್ಣ ನೀರಾವರಿ ಖಾತೆಯೇ ಬೇಕು ಎಂದು ಮಾಧುಸ್ವಾಮಿ ಪಟ್ಟುಹಿಡಿದ್ದರು.
ಆದರೆ ಆ ಖಾತೆ ಸಿ.ಪಿ.ಯೋಗೀಶ್ವರ ಪಾಲಾಗಿತ್ತು. ರಾಜೀ ನಾಮೆಯ ಗುಟುರು ಹಾಕುತ್ತಿದ್ದಂತೆ ಖಾತೆ ಬದಲಾವಣೆ ಪ್ರಹಸನ ಮಾಧು ಸ್ವಾಮಿ ಅವರಿಗೆ ವರವಾಯಿತು.
ಬದಲಾವಣೆ ಏಕೆ: ‘ನಮ್ಮವರು (ಲಿಂಗಾಯತರು) ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎನ್ನುವ ಕಾರಣಕ್ಕೆ ಯಡಿಯೂರಪ್ಪ ವಾರದಲ್ಲಿ ಎರಡು ಬಾರಿ ಖಾತೆ ಬದಲಿಸಿದ್ದಾರೆ. ಸಚಿವ ಸ್ಥಾನ ಹೋದರೂ ನಿಮ್ಮ ಜತೆ ಇರು ತ್ತೇನೆ ಎಂದು ಮುಖ್ಯಮಂತ್ರಿಗೆ ಈ ಹಿಂದೆ ಮಾಧುಸ್ವಾಮಿ ತಿಳಿಸಿದ್ದರು. ಈ ಎಲ್ಲವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರನ್ನು ಡಮ್ಮಿ ಮಾಡಲಾಗುತ್ತಿತ್ತು. ಆದರೆ ಸಚಿವರು ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದು ರೆಬಲ್ ಆಗುತ್ತಿದ್ದಂತೆ ಮತ್ತೆ ನೀರಾವರಿ ಖಾತೆ ನೀಡಲಾಗಿದೆ’ ಎಂದು ಮಾಧುಸ್ವಾಮಿ ಆಪ್ತರು ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.