ಬೆಂಗಳೂರು: ‘ಮಡಿವಾಳರ ವೃತ್ತಿಯನ್ನು ಶ್ರೀಮಂತರು ಹಾಗೂ ಬೃಹತ್ ಕಂಪನಿಗಳು ಆಕ್ರಮಿಸಿಕೊಂಡಿವೆ. ಮಡಿವಾಳ ಜನಾಂಗದವರನ್ನು ಕೂಲಿ ಕಾರ್ಮಿಕರನ್ನಾಗಿ ಮಾಡಿಕೊಂಡಿದ್ದು, ಈ ಅಪಾಯಕಾರಿ ಬೆಳವಣಿಗೆಗೆ ಲಗಾಮು ಹಾಕಬೇಕು’ ಎಂದುಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಡಿವಾಳರ ಕುಲ-ಕಸುಬು ಬಂಡವಾಳ ಶಾಹಿಗಳ ಪಾಲಾಗುವುದನ್ನು ತಡೆಯಲುಪ್ರತ್ಯೇಕ ನಿಯಮ ರಚಿಸುವ ಕುರಿತು ಚರ್ಚೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಬೇಡಿಕೆ ಬಂದಿದ್ದು, ಈ ಬಗ್ಗೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು’ ಎಂದರು.
ಚಿತ್ರದುರ್ಗದ ಮಾಚಿದೇವ ಸಂಸ್ಥಾನ ಮಠದ ಬಸವ ಮಾಚಿದೇವ ಸ್ವಾಮೀಜಿ,‘ಲಾಂಡ್ರಿ ನಂಬಿ ಬದುಕು ಸಾಗಿಸುತ್ತಿರುವವರಿಗೆ ಸರ್ಕಾರ ಉಚಿತವಾಗಿ ವಿದ್ಯುತ್ ಪೂರೈಸಬೇಕು.ದೇವರ ಹಿಪ್ಪರಗಿಯಲ್ಲಿರುವ ಮಾಚಿದೇವರ ಜನ್ಮಸ್ಥಳದಲ್ಲಿ ಭೂಕಬಳಿಕೆ ನಡೆದಿದ್ದು, ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಮುದಾಯಕ್ಕೆ ನಿಗಮ ಮಂಡಳಿ ಹಾಗೂ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆಮಡಿವಾಳ ಮಾಚಿದೇವರ ಹೆಸರಿಡಬೇಕು’ ಎಂದುಆಗ್ರಹಿಸಿದರು.
ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ನಂಜಪ್ಪ,‘ಮಡಿವಾಳ ಸಮುದಾಯ ಶಿಕ್ಷಣ ಪಡೆಯಲು ಪರದಾಡಬೇಕಾದ ಪರಿಸ್ಥಿತಿ ಇದೆ. ಇದಕ್ಕಾಗಿ ಕಾಂಗ್ರೆಸ್ ಸರ್ಕಾರದ ಅವಧಿಯಿಂದ ಹೋರಾಟ ಮಾಡಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.