ಮಂಗಳೂರು: ನಗರದ ಮಂಗಳಾದೇವಿ ಸಮೀಪದ ಅಮರ್ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ ಎಂಬ ಮಹಿಳೆಯನ್ನು ಶನಿವಾರ ರಾತ್ರಿ ಕೊಲೆ ಮಾಡಿರುವ ದುಷ್ಕರ್ಮಿಗಳು, ಮೃತದೇಹವನ್ನು ಭೀಕರವಾಗಿ ಕತ್ತರಿಸಿ ಕೆಪಿಟಿ ವೃತ್ತ ಮತ್ತು ನಂದಿಗುಡ್ಡೆಯ ಕೋಟಿ ಚೆನ್ನಯ ವೃತ್ತದ ಬಳಿ ಚೀಲದಲ್ಲಿ ತುಂಬಿ ಎಸೆದು ಹೋಗಿದ್ದಾರೆ.
ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ಶವವನ್ನು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಪಿಟಿ ವೃತ್ತದ ಬಳಿ ಗೂಡಂಗಡಿ ಒಂದರ ಎದುರಿನಲ್ಲಿ ಇರಿಸಲಾಗಿತ್ತು. ಮುಂಡವನ್ನು ಕೋಟಿ ಚೆನ್ನಯ್ಯ ವೃತ್ತದ ಬಳಿ ಚೀಲದಲ್ಲಿ ತುಂಬಿ ಎಸೆಯಲಾಗಿತ್ತು. ಕೈ ಮತ್ತು ಕಾಲಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ತುಂಬಿಸಿ ಚೀಲದೊಳಕ್ಕೆ ಹಾಕಲಾಗಿತ್ತು.
‘ಮೃತ ಮಹಿಳೆಯು ಮಡಿಕೇರಿಯ ಸುದೀಪ್ ಎಂಬಾತನನ್ನು ಮದುವೆಯಾಗಿದ್ದು, ಆತನಿಂದ ವಿಚ್ಛೇದನ ಪಡೆದುಕೊಂಡಿದ್ದರು. ತಂದೆಯ ತಂಗಿಯೊಂದಿಗೆ ಅಮರ್ ಆಳ್ವರ ರಸ್ತೆಯಲ್ಲಿ ವಾಸವಿದ್ದರು. ಮಹಿಳೆಯ ವಿಚ್ಛೇದಿತ ಪತಿ ಕಳ್ಳತನ ಪ್ರಕರಣವೊಂದರಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ವೈಯಕ್ತಿಕ ದ್ವೇಷದಿಂದ ಕೊಲೆ ನಡೆದಿರುವುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ. ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.