ಧಾರವಾಡ: ‘ಗೆಜೆಟ್ ಪ್ರಕಟಣೆ ಇಲ್ಲದೆ ನ್ಯಾಯಮಂಡಳಿ ತೀರ್ಪು ಜಾರಿಗೆ ತರುವ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸುತ್ತಿದ್ದು, ಅದಕ್ಕೆ ರಾಜ್ಯಸಭೆಯ ಅನುಮೋದನೆ ದೊರೆತರೆ ಡಿಸೆಂಬರ್ ವೇಳೆಗೆ ಮಹದಾಯಿ ನೀರನ್ನು ರಾಜ್ಯ ಪಡೆಯಬಹುದು’ ಎಂದು ಸುಪ್ರೀಂಕೋರ್ಟ್ ಹಿರಿಯ ವಕೀಲ ಮೋಹನ ಕಾತರಕಿ ಹೇಳಿದರು.
ಸಿ.ಎಸ್.ಜವಳಿ ಕಾನೂನು ಕಾಲೇಜು ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೆಚ್ಚಿನ ನೀರಿಗೆ ಬೇಡಿಕೆ ಸಲ್ಲಿಸಿ ಕರ್ನಾಟಕ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಇದಕ್ಕೆ ಪ್ರತಿಯಾಗಿ ಗೋವಾ ಸರ್ಕಾರ ಕೂಡ ಅರ್ಜಿ ಸಲ್ಲಿಸಿದೆ. ಈ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ಇರುವುದರಿಂದ ಸರ್ಕಾರ ಗೆಜೆಟ್ ಹೊರಡಿಸುವಂತಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರ ಹೊಸ ಮಸೂದೆಯನ್ನು ಮಂಡಿಸಿದೆ’ ಎಂದರು.
‘ಈ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ. ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯಲ್ಲೂ ಈ ಮಸೂದೆ ಮಂಡನೆಯಾಗಲಿದೆ. ಅಲ್ಲಿಯೂ ಅಂಗೀಕಾರ ದೊರೆತರೆ ಗೆಜೆಟ್ಗೆ ಕಾಯದೆ, ನ್ಯಾಯಮಂಡಳಿಯ ತೀರ್ಪಿನ ಅನ್ವಯ ಮಹದಾಯಿ ನದಿಯ ರಾಜ್ಯದ ಪಾಲಿನ ನೀರನ್ನು ಕರ್ನಾಟಕ ಪಡೆಯಬಹುದು’ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.