ADVERTISEMENT

ವರ್ತುಲಾಕಾರದ ಸಮವಸರಣ ವೈಭವ

ಧರ್ಮಸ್ಥಳದಲ್ಲಿ ಇಂದು ಮಹಾಮಸ್ತಕಾಭಿಷೇಕ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 18:47 IST
Last Updated 15 ಫೆಬ್ರುವರಿ 2019, 18:47 IST
ಯಕ್ಷಗಾನ ನೃತ್ಯ
ಯಕ್ಷಗಾನ ನೃತ್ಯ   

ಉಜಿರೆ: ಬೆಂಗಳೂರಿನ ಚಿತ್ರಾ ಆರ್ಟ್ಸ್‌ ಸ್ಟುಡಿಯೊದ ಜಿನೇಂದ್ರ ಅವರ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ರಚಿಸಲಾದ ವರ್ತುಲಾಕಾರದ ಆಕರ್ಷಕ ವಿನ್ಯಾಸದ ಸಮವಸರಣದಲ್ಲಿ ಶುಕ್ರವಾರ ವಿಶೇಷ ಸಂಭ್ರಮ-ಸಡಗರ.

ತೀರ್ಥಂಕರರು ತಮ್ಮ ದಿವ್ಯ ಧ್ವನಿಯಿಂದ ಉಪದೇಶ ನೀಡುವ ಧರ್ಮಸಭೆಗೆ ಹಾಗೂ ಇಲ್ಲಿ ಉಪದೇಶಾಮೃತ ಪಡೆಯಲು ಸರ್ವರಿಗೂ ಸಮಾನ ಅವಕಾಶ ಇರುವುದರಿಂದ ಇದಕ್ಕೆ ಸಮವಸರಣ ಎನ್ನುತ್ತಾರೆ.

ಬೀಡಿನಿಂದ (ಹೆಗ್ಗಡೆಯವರ ನಿವಾಸ) ಭವ್ಯ ಮೆರವಣಿಗೆಯಲ್ಲಿ ಧರ್ಮ ಚಕ್ರ ಹೊತ್ತು ಸರ್ವಾಹ್ನ ಯಕ್ಷ ದೇವರ ಮೂರ್ತಿಯನ್ನು ಸಮವಸರಣ ವೇದಿಕೆಗೆ ಕರೆ ತರಲಾಯಿತು. ಸಮವಸರಣ ಮಂಟಪದಲ್ಲಿ ಚೆಂಡೆವಾದನದೊಂದಿಗೆ ಸರ್ವಾಹ್ನ ಯಕ್ಷ ಉತ್ಸವ ನಡೆಯಿತು.

ADVERTISEMENT

ಆದಿನಾಥ ತೀರ್ಥಂಕರರ ಸಮವಸರಣದಲ್ಲಿ ಎಲ್ಲೆಲ್ಲೂ ಸಂಭ್ರಮ, ಸಡಗರ. ಓಂಕಾರ ದಿವ್ಯ ಧ್ವನಿ. ಪಂಚ ನಮಸ್ಕಾರ ಮಂತ್ರ ಪಠಣ. ಜಿನ ಭಕ್ತಿಗೀತೆಗಳ ಸುಶ್ರಾವ್ಯ ಗಾಯನ. ನೃತ್ಯ ಸಂಭ್ರಮ, ಯಕ್ಷಗಾನ ಶೈಲಿಯ ಕುಣಿತ. ‘ಏನು ರಮ್ಯ, ಏನು ಸೌಮ್ಯ’ ಎಂಬ ಯಕ್ಷಗಾನ ಶೈಲಿಯ ಹಾಡಿಗೆ 32 ಮಂದಿ ಹಿರಿಯ ಹಾಗೂ ಕಿರಿಯ ಯಕ್ಷಗಾನ ಕಲಾವಿದರು ನರ್ತನ ಮಾಡಿ ಸಮವಸರಣದ ಸೊಗಡನ್ನು ಹೆಚ್ಚಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಬಂದ 250 ಮಂದಿ ಶ್ರಾವಕ -ಶ್ರಾವಕಿಯರು ಜಿನ ಭಜನೆಗಳನ್ನು ಸುಶ್ರಾವ್ಯವಾಗಿ ಹಾಡಿ ಸಮವಸರಣಕ್ಕೆ ವಿಶೇಷ ಮೆರುಗು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.