ಉಜಿರೆ: ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ಮಂಗಳವಾರ ರತ್ನಗಿರಿಯಲ್ಲಿ 216 ಕಲಶಗಳಿಂದ ಬಾಹುಬಲಿ ಮೂರ್ತಿಗೆ ಪಾದಾಭಿಷೇಕ ನಡೆಯಿತು.
ಯಜ್ಞ ಶಾಲೆಯಲ್ಲಿ ಯಾಗಮಂಡಲಾರಾಧನೆ, ಧ್ವಜ ಪೂಜೆ, ಶ್ರೀಬಲಿ ವಿಧಾನ ನಡೆಯಿತು. ಧರ್ಮಸ್ಥಳದಲ್ಲಿ ಆಚಾರ್ಯ ವರ್ಧಮಾನ ಸಾಗರ್ಜೀ ಮಹಾರಾಜರಿಗೆ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ. ಹೆಗ್ಗಡೆ ಅವರು ಆಹಾರ ದಾನ ನೀಡಿದರು. ಇತರ ಮುನಿಗಳಿಗೆ ಸಹ ದಾನ ನೀಡಲಾಯಿತು.
‘ಇಂದಿನ ಪರಿವರ್ತನಶೀಲ ಸಮಾಜದಲ್ಲಿ ಕಾಲಕಾಲಕ್ಕೆ ಮಹಾಪುರುಷರು ಜನ್ಮ ತಾಳುತ್ತಾರೆ. ಅಂತಹ ಪುಣ್ಯ ಪುರುಷರನ್ನು ನಾವೆಲ್ಲಾ ಗೌರವಿಸಬೇಕು’ ಎಂದು ಆಚಾರ್ಯ ವರ್ಧಮಾನ ಸಾಗರ್ಜೀ ಮಹಾರಾಜರು ಹೇಳಿದರು.
ಆಚಾರ್ಯ ಕೀರ್ತಿ ಸಾಗರ ಮುನಿ ಮಹಾರಾಜರು ಆಶೀರ್ವಚನ ನೀಡಿ, ‘ನಾವು ದೇವಿ ದೇವಸ್ಥಾನಗಳಿಗೆ ಹೋಗುತ್ತೇವೆ, ಪೂಜಿಸುತ್ತೇವೆ. ಆದರೆ ದೇವಸ್ಥಾನದಿಂದ ಹೊರಬಂದ ಮೇಲೆ ನಾವು ಹೆಣ್ಣನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ದೇವಸ್ಥಾನದಲ್ಲಿ ಉಪಯೋಗಿಸುವ ಆರತಿ, ಪೂಜಾ, ವಂದನೆ, ಸ್ತುತಿ ಇವೆಲ್ಲವೂ ಸ್ತ್ರೀ ವಾಚಕ ಪದಗಳೇ ಆಗಿವೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಬೇಕಾದರೆ ಹೆಣ್ಣು ಇರಲೇ ಬೇಕು. ಹೀಗಿದ್ದರೂ ಆಕೆಯನ್ನು ನಾವು ಕೀಳು ದೃಷ್ಟಿಯಿಂದ ನೋಡುತ್ತಿರುತ್ತವೆ. ಇದು ನಿಲ್ಲಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.