ಬೆಳಗಾವಿ: ನಿರಂತರವಾಗಿ ಮಳೆ ಬೀಳುತ್ತಿರುವುದರಿಂದಾಗಿ ಮಲಪ್ರಭಾ ಜಲಾಶಯದಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣ ಗಂಟೆ ಗಂಟೆಗೂ ಹೆಚ್ಚಾಗುತ್ತಿದೆ.
ರಾತ್ರಿ 10ರ ವೇಳೆಗೆ ನದಿಗೆ 27,508 ಕ್ಯುಸೆಕ್ ಒಳಹರಿವು ಇತ್ತು ಹಾಗೂ 25ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗುತ್ತಿತ್ತು. ಇದರಿಂದ ಸವದತ್ತಿ ತಾಲ್ಲೂಕಿನ ಮುನವಳ್ಳಿಯ ಯಲಿಗಾರ ಓಣಿಯು ಜಲಾವೃತವಾಗಿದೆ. ಹೋದ ವರ್ಷವೂ ಮುನವಳ್ಳಿ ಪಟ್ಟಣ ಪ್ರವಾಹಕ್ಕೆ ತುತ್ತಾಗಿತ್ತು.
ಪ್ರವಾಹ ಪರಿಸ್ಥಿತಿ ಉಂಟಾಗಿರುವುದದು ಸವದತ್ತಿ ಹಾಗೂ ರಾಮದುರ್ಗ ತಾಲ್ಲೂಕುಗಳ ನದಿ ತೀರದ ಗ್ರಾಮಗಳ ಜನರ ನಿದ್ದೆಗೆಡಿಸಿದೆ. ರಾಮದುರ್ಗ ತಾಲ್ಲೂಕಿನ ತೊರಗಲ್ಲ, ಗೊಣಗನೂರ, ಸುನ್ನಾಳ, ಘಟಕನೂರ, ಹಲಗತ್ತಿ, ಹಂಪಿಹೊಳಿ, ಅವರಾದಿ, ಸಂಗಳ, ನರಗುಂದ ತಾಲ್ಲೂಕಿನ ಲಕಮಾಪುರ, ಬೆಳ್ಳೇರಿ, ವಾಸನ, ಕೊಣ್ಣೂರು, ಶಿರೋಳ, ರೋಣ ತಾಲ್ಲೂಕಿನ ಗುಳಗಂಜಿ, ಮೆಣಸಗಿ, ಹೊಳೆಮಣ್ಣೂರ, ಗಾಡಗೋಳ, ಹೊಳೆಆಲೂರ, ಕುರುವಿನಕೊಪ್ಪ, ಅಮರಗೋಳ, ಹೊಳೆಹಡಗಲಿ, ಬಸರಕೋಡ, ಬದಾಮಿ ತಾಲ್ಲೂಕಿನ ಗೋವನಕೊಪ್ಪ, ಸುಳ್ಳ, ಕಿತ್ತಲಿ, ಜಕನೂರ, ಬೂದಿಹಾಳ, ನೀರಲಗಿ, ತನ್ನೀಹಾಳ, ಕಾಕರಕಿ, ಮುಮರಡ್ಡಿಕೊಪ್ಪ, ಖ್ಯಾಡ, ಮನ್ನೇರಿ, ಢಾಕನಶಿರೂರು, ಪಟ್ಟದಕಲ್ಲು ಗ್ರಾಮಗಳಲ್ಲಿ ಸದ್ಯ ಪ್ರವಾಹ ಮುನ್ಸೂಚನೆ ನೀಡಲಾಗುತ್ತಿದೆ.
ರಾಮದುರ್ಗ ಸುರೇಬಾನ ನಡುವಣ ಹಳೆಯ ಸೇತುವೆ, ಮುನವಳ್ಳಿಯ ಹಳೆಯ ಸೇತುವೆ ಮತ್ತು ಹೊಳೆ ಆಲೂರು ಬದಾಮಿ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.