ADVERTISEMENT

ಘರ್‌ ವಾಪಸಿಯಾದರೆ ನಮ್ಮನ್ನು ಎಲ್ಲಿ ಇಡುತ್ತೀರಿ? ಡಾ.ಮಲ್ಲಿಕಾ ಘಂಟಿ

ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿಗೆ ಡಾ.ಶಿಮುಶ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 18:19 IST
Last Updated 27 ಡಿಸೆಂಬರ್ 2021, 18:19 IST
ಹಾವೇರಿ ನಗರದ ಬಸವಕೇಂದ್ರ ಹೊಸಮಠದಲ್ಲಿ ‘ಶರಣ ಸಂಸ್ಕೃತಿ ಉತ್ಸವ–2021’ ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಅವರಿಗೆ ‘ಡಾ.ಶಿಮುಶ ಪ್ರಶಸ್ತಿ’ಯನ್ನು ಚಿತ್ರದುರ್ಗದ ಮುರುಘಾ ಶರಣರು ಪ್ರದಾನ ಮಾಡಿದರು 
ಹಾವೇರಿ ನಗರದ ಬಸವಕೇಂದ್ರ ಹೊಸಮಠದಲ್ಲಿ ‘ಶರಣ ಸಂಸ್ಕೃತಿ ಉತ್ಸವ–2021’ ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಅವರಿಗೆ ‘ಡಾ.ಶಿಮುಶ ಪ್ರಶಸ್ತಿ’ಯನ್ನು ಚಿತ್ರದುರ್ಗದ ಮುರುಘಾ ಶರಣರು ಪ್ರದಾನ ಮಾಡಿದರು    

ಹಾವೇರಿ: ‘ಮತಾಂತರ ಆದವರು ಘರ್‌ ವಾಪಸಿಯಾಗಿ ಎಂದು ಯುವ ಸಂಸದರೊಬ್ಬರು ಕರೆ ನೀಡಿದ್ದಾರೆ. ನಾವು ಘರ್‌ ವಾಪಸಿಯಾದರೆ ನೀವು ನಮ್ಮನ್ನು ಎಲ್ಲಿ ಇಡುತ್ತೀರಿ? ತಲೆಯಲ್ಲಾ? ಅಥವಾ ಕಾಲಲ್ಲ? ಎಂಬುದನ್ನು ಸ್ಪಷ್ಟಪಡಿಸಿ’ ಎಂದು ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಖಾರವಾಗಿ ಪ್ರಶ್ನಿಸಿದರು.

ನಗರದ ಬಸವಕೇಂದ್ರ ಹೊಸಮಠದಲ್ಲಿ ಲಿಂ.ಜಗದ್ಗುರು ನೈಘಂಟಿನ ಸಿದ್ಧಬಸವ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಅಥಣಿ ಮುರುಘೇಂದ್ರ ಶಿವಯೋಗಿಗಳ ಸ್ಮರಣೋತ್ಸವದ ನಿಮಿತ್ತ ‘ಶರಣ ಸಂಸ್ಕೃತಿ ಉತ್ಸವ–2021’ ಹಾಗೂ ಡಾ.ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ ತೃತೀಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಡಾ.ಶಿಮುಶ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಘರ್‌ ವಾಪಸಿ’ ಮಾತನ್ನುಜನತಾ ನ್ಯಾಯಾಲಯದೊಳಗೆ ಇಟ್ಟು, ಜನರ ತೀರ್ಪು ಏನಿದೆ ಎಂಬುದನ್ನು ಕೇಳಬೇಕಿದೆ.12ನೇ ಶತಮಾನದಲ್ಲಿ ಬ್ರಾಹ್ಮಣನಾಗಿ ಹುಟ್ಟಿದ ಬಸವಣ್ಣನನ್ನು ಬ್ರಾಹ್ಮಣ ಎಂದು ಆ ಸಮಾಜ ಇಂದಿಗೂ ಒಪ್ಪಿಕೊಂಡಿಲ್ಲ. ಕಾರಣ ಆ ಸಮಾಜದೊಳಗಿದ್ದ ಕಂದಾಚಾರವನ್ನು ಬಯಲಿಗೆಳೆದು, ಶ್ರೇಣೀಕರಣ ವ್ಯವಸ್ಥೆಯನ್ನು ವಿರೋಧಿಸಿದ್ದರು ಎಂದರು.

ADVERTISEMENT

ಹಿಂದೂ ಧರ್ಮದ ಕಂದಾಚಾರ ಖಂಡಿಸಿದ ಶರಣರಾದ ಬಸವಣ್ಣ, ಕಾಳವ್ವೆ, ಗೊಗ್ಗವ್ವೆ ಅವರನ್ನು ಎಲ್ಲಿ ಇಡುತ್ತೀರಿ? ಬೌದ್ಧ ಧರ್ಮ ಸ್ವೀಕರಿಸಿದ ಡಾ.ಅಂಬೇಡ್ಕರ್‌ ಅವರನ್ನು ವಾಪಸ್‌ ಕರೆ ತರುತ್ತೀರಾ?ಎಂದು ಸವಾಲೆಸೆದರು.

ಆಹಾರ ಸಂಸ್ಕೃತಿ ಬಗ್ಗೆ ದೊಡ್ಡ ರಾಜಕಾರಣ ನಡೆಯುತ್ತಿದೆ. ನಮ್ಮ ಮನೆಯಲ್ಲಿ ಇರುವುದನ್ನು ನಾವು ತಿನ್ನುತ್ತೇವೆ. ರಾಜಕಾರಣ ಮತ್ತು ಹಿಂದುತ್ವಕ್ಕೆ ನನ್ನ ಪ್ರಶ್ನೆ ಇಷ್ಟೆ. ಇದನ್ನೇ ತಿನ್ನಿ ಎಂದು ತಾಕೀತು ಮಾಡಲು ನಿಮಗೆ ಯಾವ ಅಧಿಕಾರವಿದೆ. ಅಂಬೇಡ್ಕರ್‌ ಅವರು ಅಕ್ಷರ, ಸ್ವಾಭಿಮಾನ ನೀಡದಿದ್ದರೆ ನಾನು ಇಂದು ತಲೆಯ ಮೇಲೆ ಹೂ ಹಾಕಿಸಿಕೊಂಡು ಪ್ರಶಸ್ತಿ ಪಡೆಯುತ್ತಿರಲಿಲ್ಲ ಎಂದರು.

ಮಾಧ್ಯಮಗಳ ವಿರುದ್ಧ ಕಿಡಿ

70–80ರ ದಶಕದಲ್ಲಿ ಮಾತನ್ನು ಕೇಳುವ ವ್ಯವಧಾನವಿತ್ತು. ಇಂದು ಮಾತನ್ನು ತಿರುಚುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಮಾತನಾಡಲು ಭಯ ಪಡುವ ವಾತಾವರಣ ಸೃಷ್ಟಿಯಾಗಿದೆ. 21ನೇ ಶತಮಾನದಲ್ಲಿ 12 ಶತಮಾನದ ನೆಮ್ಮದಿಯ ಬದುಕು ಮರುಕಳಿಸುವುದಕ್ಕಾಗಿ ನಮ್ಮಂಥವರು ಮಾತನಾಡುವ ಅಗತ್ಯತೆ ಇದೆ ಎಂದು ಮಾಧ್ಯಮಗಳ ವಿರುದ್ಧ ಡಾ.ಮಲ್ಲಿಕಾ ಘಂಟಿ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.