ಬೆಂಗಳೂರು: ‘ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಭೆ ಕಳವಳಕಾರಿಯಾಗಿದ್ದು, ಶ್ರಮ ಹಾಗೂ ಕೃಷಿಮೂಲ ಸಂಸ್ಕೃತಿ ಜಿಲ್ಲೆಯನ್ನು ಕೋಮುವಾದಿಗಳು ಆಡುಂಬೊಲ ಮಾಡಿಕೊಳ್ಳದಂತೆ ಮಂಡ್ಯದ ಜನ ಎಚ್ಚರಿಕೆ ವಹಿಸಬೇಕು’ ಎಂದು ಜಾಗೃತ ನಾಗರಿಕರು ಕರ್ನಾಟಕ ಆಗ್ರಹಿಸಿದೆ.
‘ರಾಜ್ಯಾದ್ಯಂತ ಗಣೇಶ ಮೆರವಣಿಗೆ ವೇಳೆ ನಿಷೇಧವಿದ್ದರೂ ಅಲ್ಲಿ ಡಿಜೆ ಬಳಸಲಾಗಿದೆ. ಪ್ರತಿಬಂಧಕಾಜ್ಞೆ ಮಧ್ಯೆ ಹೆಚ್ಚು ಜನರೊಂದಿಗೆ ಬಿಜೆಪಿ, ಜೆಡಿಎಸ್ ನಾಯಕರು ಪಾಲ್ಗೊಂಡಿದ್ದು ಉದ್ದೇಶಪೂರ್ವಕ ಕೃತ್ಯಗಳು ಎನ್ನಿಸುತ್ತಿವೆ. ಮಸೀದಿ ಮುಂದೆ ಮೆರವಣಿಗೆ ನಿಲ್ಲಿಸಿರುವುದು. ಇದೇ ವೇಳೆ ವಿದ್ಯುತ್ ಕಡಿತವಾಗಿದ್ದು ಅನುಮಾನ ಗಟ್ಟಿಗೊಳಿಸಿವೆ. ಮಸೀದಿ ಕಡೆಯಿಂದ ಕಲ್ಲು ತೂರಾಟ ಮಾಡಲಾಗಿದೆ ಎನ್ನುವ ವರದಿಗಳು ಆತಂಕಕಾರಿʼ ಎಂದು ತಿಳಿಸಿದೆ.
‘ನಾಗಮಂಗಲದಲ್ಲಿ ನಡೆದಿದ್ದ ಘರ್ಷಣೆ, ಹನುಮ ಜಯಂತಿ ಹೆಸರಿನಲ್ಲಿ ಶ್ರೀರಂಗಪಟ್ಟಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿ ಆಡಿದ ಮಾತುಗಳು ಸಿದ್ಧ ಮಾದರಿ ಸೂಚಿಸುತ್ತವೆ. ಕರಾವಳಿ ಭಾಗದ ಪ್ರಯೋಗಗಳನ್ನು ಮಂಡ್ಯದಲ್ಲೂ ವಿಸ್ತರಿಸುತ್ತಿರುವುದು ಆತಂಕಕಾರಿ. ನೆಲದ ಸಾಮರಸ್ಯ ಕಾಪಾಡಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕುʼ ಎಂದು ವೇದಿಕೆಯ ಕೆ.ಮರುಳಸಿದ್ದಪ್ಪ
ಜಿ.ರಾಮಕೃಷ್ಣ, ವಿಜಯಾ. ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ಕೆ.ಎಸ್.ವಿಮಲಾ, ಇಂದಿರಾ ಕೃಷ್ಣಪ್ಪ, ಜಾಣಗೆರೆ ವೆಂಕಟರಾಮಯ್ಯ ಮತ್ತಿತರರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.