ಮಂಗಳೂರು: ಮಹಿಳಾ ಸಿಬ್ಬಂದಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರತ್ನಾಕರ್ ಅವರನ್ನು ಶನಿವಾರ ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 2 ದಿನ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
‘ಸಂತ್ರಸ್ತೆಯರು ದೂರು ನೀಡಲು ಹಿಂದೇಟು ಹಾಕುತ್ತಿದ್ದರು. ಆದರೆ, ಶನಿವಾರ ಮೂವರು ಸಂತ್ರಸ್ತೆಯರು ಹಾಗೂ ಆಂತರಿಕ ತನಿಖಾ ಸಮಿತಿಯ ಒಬ್ಬ ಸದಸ್ಯರ ಹೇಳಿಕೆಗಳನ್ನು ಪಡೆಯಲಾಗಿದೆ. ಅದರ ಆಧಾರದ ಮೇಲೆ ಬಂಧಿಸಲಾಗಿದೆ. ಆರೋಪಿಯು ಸಂತ್ರಸ್ತೆಯರನ್ನು ಕುಂದಾಪುರ, ಮುರ್ಡೇಶ್ವರ, ಮಡಿಕೇರಿ, ಪಿರಿಯಾಪಟ್ಟಣಗಳಿಗೆ ಕರೆದೊಯ್ದು, ಇದೇ ರೀತಿಯ ವರ್ತನೆ ತೋರಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ’ ಎಂದು ಹೇಳಿದ್ದಾರೆ.
‘ಮಹಿಳಾ ಸಂಘಟನೆ ಸದಸ್ಯರೊಬ್ಬರ ದೂರು ಆಧರಿಸಿ, ಡಾ.ರತ್ನಾಕರ್ ಅವರನ್ನು ಶುಕ್ರವಾರ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಅವರ ಬಳಿಯಿದ್ದ ಮೊಬೈಲ್ ಹಾಗೂ ಇನ್ನಿತರ ದಾಖಲೆ ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.