ಬೆಂಗಳೂರು: ಲಾಕ್ಡೌನ್ ಅವಧಿಯಲ್ಲಿ ಮಾವು ಮಾರಾಟಕ್ಕೆ ಅನುಕೂಲವಾಗುವಂತೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘವು ಮಾವು ಬೆಳೆಗಾರರಿಗೆ ಹಣ್ಣಿನ ಪ್ಯಾಕಿಂಗ್ ಬಾಕ್ಸ್ಗಳನ್ನು ಉಚಿತವಾಗಿ ಸೋಮವಾರ ವಿತರಿಸಿತು.
ಮಾವನ್ನು ವೈಜ್ಞಾನಿಕವಾಗಿ ಕಟಾವು ಮಾಡಿ ಗ್ರಾಹಕರಿಗೆ ನೇರ ಮಾರಾಟ ಮಾಡಲು ಇಚ್ಛಿಸುವ ಮಾವು ಬೆಳೆಗಾರರಿಗೆ ಸಂಘವು ಸಹಾಯಹಸ್ತ ಚಾಚಿದೆ.
ಮಾವು ಬೆಳೆಗಾರರಿಗೆ ಬಾಕ್ಸ್ ವಿತರಿಸಿ ಮಾತನಾಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ರಾಜೇಂದ್ರ ಪ್ರಸಾದ್,‘ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಕೋವಿಡ್ ಎರಡನೇ ಅಲೆಯಿಂದ ಕೃಷಿ ರಂಗಕ್ಕೆ ಹಾಗೂ ಬೆಳೆಗಾರರಿಗೆ ಹೆಚ್ಚು ಸಮಸ್ಯೆಯಾಗಿಲ್ಲ. ಬೆಳೆಗಾರರು ಉತ್ಪನ್ನಗಳ ಪೂರೈಕೆಯಲ್ಲಿ ಗುಣಮಟ್ಟವನ್ನು ಸದಾ ಕಾಯ್ದುಕೊಳ್ಳಬೇಕು’ ಎಂದರು.
‘ಎಂತಹ ಸಮಸ್ಯೆಗಳು ಎದುರಾಗಿದ್ದರೂ ಬೆಳೆಗಾರರು ಕೃಷಿ ಉತ್ಪನ್ನಗಳನ್ನು ಉತ್ಪಾದನೆ ಕಡೆಗಣಿಸಿಲ್ಲ. ರೈತರ ನೆರವಿಗಾಗಿ ವಿಶ್ವವಿದ್ಯಾಲಯವು ಅಗ್ರಿ ವಾರ್ರೂಂ ಆರಂಭಿಸಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಸಹಾಯವಾಣಿಯನ್ನೂ ಆರಂಭಿಸಿದ್ದೇವೆ. ರೈತರು ಹಾಗೂ ಗ್ರಾಹಕರನ್ನು ಸಮೀಪಿಸುವುದೇ ನಮ್ಮ ಉದ್ದೇಶ’ ಎಂದು ಹೇಳಿದರು.
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ನಾರಾಯಣಗೌಡ, ‘ಮಾವನ್ನು ಮರದಿಂದ ಕೆಳಗೆ ಬೀಳದಂತೆ ಎಚ್ಚರಿಕೆಯಿಂದ ಕಟಾವು ಮಾಡಿ, ನೈಸರ್ಗಿಕವಾಗಿ ಹಣ್ಣನ್ನು ಮಾಗಿಸುವ ವಿಧಾನವನ್ನು ಬೆಳೆಗಾರರು ಅನುಸರಿಸುತ್ತಿದ್ದಾರೆ. ಇದರಿಂದ ಹಣ್ಣು ಉತ್ತಮ ಗುಣಮಟ್ಟದಿಂದ ಕೂಡಿರುವುದರ ಜೊತೆಗೆ ದರವೂ ಹೆಚ್ಚಿಸಬಹುದು. ಇದಕ್ಕಾಗಿ ಸಂಘವು ಬೆಳೆಗಾರರ ಬೆಂಬಲಕ್ಕೆ ನಿಂತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.