ADVERTISEMENT

ಮಂತ್ರಿ ಕುಟುಂಬ: ಲುಕ್‌ ಔಟ್‌ ಸುತ್ತೋಲೆ ಅಮಾನತಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 22:30 IST
Last Updated 5 ಸೆಪ್ಟೆಂಬರ್ 2024, 22:30 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ಮಂತ್ರಿ ಡೆವಲಪರ್ಸ್ ಮುಖ್ಯಸ್ಥ ಸುಶೀಲ್ ಪಿ.ಮಂತ್ರಿ, ಅವರ ಪತ್ನಿ ಸ್ನೇಹಲ್ ಹಾಗೂ ಪುತ್ರ ಪ್ರತೀಕ್ ವಿರುದ್ಧದ ಲುಕ್‌ ಔಟ್ ಸುತ್ತೋಲೆಯನ್ನು (ಎಲ್‌ಒಸಿ) ಅಮಾನತಿನಲ್ಲಿ ಇರಿಸುವಂತೆ ಹೈಕೋರ್ಟ್ ಆದೇಶಿಸಿದೆ.

ಕೇಂದ್ರ ಗೃಹ ಸಚಿವಾಲಯದ ಬ್ಯುರೊ ಆಫ್ ಇಮಿಗ್ರೇಶನ್ ಹೊರಡಿಸಿದ್ದ ಲುಕ್‌ ಔಟ್‌ ಸುತ್ತೋಲೆ ಪ್ರಶ್ನಿಸಿ ಸುಶೀಲ್ ಪಿ.ಮಂತ್ರಿ, ಸ್ನೇಹಲ್ ಮತ್ತು ಪ್ರತೀಕ್ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿ ಈ ಕುರಿತಂತೆ ಆದೇಶಿಸಿತು.

ADVERTISEMENT

ಅರ್ಜಿದಾರರ ಪರ ಹಾಜರಾಗಿದ್ದ ಹೈಕೋರ್ಟ್‌ ವಕೀಲ ಎಸ್.ಮಹೇಶ್, ‘ಸುಶೀಲ್ ಮಂತ್ರಿ ಕುಟುಂಬದ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಒಟ್ಟು ಹತ್ತು ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಆದರೆ, ಈ ಎಲ್ಲ ಪ್ರಕರಣಗಳಿಗೂ ಹೈಕೋರ್ಟ್ ಈಗಾಗಲೇ ತಡೆ ನೀಡಿದೆ. ಹೀಗಾಗಿ, ಅರ್ಜಿದಾರರ ವಿರುದ್ಧದ ಎಲ್ಒಸಿ ಹಿಂಪಡೆಯಲು ನಿರ್ದೇಶಿಸಬೇಕು’ ಎಂದು ಕೋರಿದರು.

ಈ ಮನವಿಗೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್.ಶಾಂತಿಭೂಷಣ್ ಆಕ್ಷೇಪಿಸಿದರು. ಅಂತೆಯೇ, ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸಿ.ಎಸ್‌.ಪ್ರದೀಪ್, ‘ಹಣಕಾಸು ದುರ್ಬಳಕೆಗೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣ ದಾಖಲಾಗಿವೆ’ ಎಂದು ನ್ಯಾಯುಪೀಠಕ್ಕೆ ವಿವರಿಸಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣಗಳ ಅಂತಿಮ ಆದೇಶಕ್ಕೆ ಒಳಪಟ್ಟು ಎಲ್ಒಸಿಯನ್ನು ಅಮಾನತಿನಲ್ಲಿ ಇರಿಸಲಾಗಿದೆ. ಇವರ ಅರ್ಜಿಗಳನ್ನು ಪುರಸ್ಕರಿಸಲಾಗಿದೆ’ ಎಂದು ಆದೇಶಿಸಿತು.

ಪ್ರಕರಣವೇನು?:

ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಪಡೆದು ನಿಗದಿತ ವೇಳೆಗೆ ಫ್ಲ್ಯಾಟ್‌ಗಳನ್ನು ಹಸ್ತಾಂತರ ಮಾಡದ ಕಾರಣ ಸುಶೀಲ್ ಮಂತ್ರಿ ಕುಟುಂಬದ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ 10 ಮತ್ತು ಸುಬ್ರಹ್ಮಣ್ಯ ಪುರಂ ಠಾಣೆಯಲ್ಲಿ ಒಂದು ಎಫ್ಐಆರ್ ದಾಖಲಾಗಿತ್ತು. ಸುಬ್ರಹ್ಮಣ್ಯ ಪುರಂ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಇತ್ತೀಚೆಗಷ್ಟೇ ಹೈಕೋರ್ಟ್ ವಜಾ ಮಾಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.