ADVERTISEMENT

ಹಲವು ಗುರುಗಳ ನೀಚ ಕೆಲಸ ಬಯಲಾಗಿಲ್ಲ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 14:04 IST
Last Updated 21 ಡಿಸೆಂಬರ್ 2018, 14:04 IST
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ   

ಹೊಸದುರ್ಗ: ‘ಒಬ್ಬ ಗುರು ಮಾಡಿದ ನೀಚ ಕೆಲಸ ಮಾತ್ರ ಬಯಲಾಗಿದೆ. ಬಯಲಿಗೆ ಬಾರದೇ ಇರುವ ಹಲವು ಗುರುಗಳು ಸಮಾಜದಲ್ಲಿ ಇದ್ದಾರೆ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಕ್ಷೇಪಿಸಿದರು.

ಶುಕ್ರವಾರ ಪಟ್ಟಣದ ಹಳೆಯ ಪ್ರವಾಸಿ ಮಂದಿರದ ಆವರಣದಲ್ಲಿ ನಿರ್ಮಾಣಗೊಂಡ ಕನ್ನಡ ಭವನ ಲೋಕಾರ್ಪಣೆ ಹಾಗೂ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾಜದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಅಜ್ಞಾನಿಯಾದಲ್ಲಿ ಸಮಾಜಮುಖಿ ಕೆಲಸ ಮಾಡಲು ಸಾಧ್ಯವಿಲ್ಲ. ಆತ ಪರಮ ನೀಚನಾಗದೇ, ಪರಮಪ್ರೇಮಿಯಾಗಬೇಕು. ಮನೆ, ಮಠ, ಊರುಗಳಲ್ಲಿ ಸನ್ಮಾರ್ಗ ತೋರಿಸುವ ಕೆಲಸ ಕಣ್ಮರೆಯಾಗುತ್ತಿದೆ. ವಿವೇಕಿಗಳು ಇಲ್ಲದಿರುವುದರಿಂದ ಸಮಾಜ ದುಃಸ್ಥಿತಿಯತ್ತ ಸಾಗುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಪ್ರಸಾದಕ್ಕೆ ವಿಷ ಹಾಕಿಸಿದ ಸ್ವಾಮೀಜಿ ಅಯೋಗ್ಯ’
‘ದೇವಸ್ಥಾನದ ಪ್ರಸಾದಕ್ಕೆ ವಿಷ ಹಾಕಿಸಿದ ಸ್ವಾಮೀಜಿ ಅಯೋಗ್ಯ. ಆತ ಓದಿಕೊಂಡು ಬಂದವನಲ್ಲ. ಮೇಕೆಗೆ ಇರುವ ಸಾಮಾನ್ಯ ಗುಣ ಆತನಿಗಿಲ್ಲ’ ಎಂದು ಕೆಲ್ಲೋಡು ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಕಿಡಿಕಾರಿದರು.

ಇಂತಹ ನೀಚ ಕೆಲಸ ಮಾಡುವವರು ಇರುವುದರಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸುವಾಗ ಕಣ್ಗಾವಲಾಗಿ ಕಾಯಬೇಕಿದೆ. ಹಾಗೆಯೇ, ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತಹ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.