ADVERTISEMENT

ಬಕ್ರೀದ್‌ ಆಚರಣೆ: ಪ್ರಾಣಿ ಬಲಿಗೆ ರಾಜ್ಯದಲ್ಲಿ ಹಲವು ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 15:26 IST
Last Updated 7 ಜುಲೈ 2022, 15:26 IST
   

ಬೆಂಗಳೂರು: ಬಕ್ರೀದ್‌ (ಜುಲೈ 10) ಸಮಯದಲ್ಲಿ ಪ್ರಾಣಿ ಬಲಿ ನೀಡುವ ಆಚರಣೆಯ ಮೇಲೆ ಸರ್ಕಾರ ಹಲವು ನಿರ್ಬಂಧಗಳನ್ನು ಹೇರಿದೆ.

ಈ ಬಾರಿಯ ಬಕ್ರೀದ್‌ ಹಬ್ಬದ ವೇಳೆ ಜಾನುವಾರುಗಳನ್ನು ಬಲಿ ನೀಡಲು ಅವಕಾಶ ಕೊಡುವುದಿಲ್ಲ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಅವರು ಹೇಳಿಕೆ ನೀಡಿದ ಮರು ದಿನವೇ ಸರ್ಕಾರ ಸುತ್ತೋಲೆ ಹೊರಡಿಸಿದೆ.

ರಾಜ್ಯದಲ್ಲಿ ಜಾರಿಯಲ್ಲಿರುವ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ವಯಸ್ಸಿನ ದನ, ಆಕಳು, ಎತ್ತು, ಕರುಗಳನ್ನು ಬಲಿ ನೀಡುವಂತಿಲ್ಲ. ಬಲಿ ನೀಡುವುದಕ್ಕಾಗಿ ಅವುಗಳನ್ನು ಸಾಗಾಟ ಮಾಡುವಂತೆಯೂ ಇಲ್ಲ ಎಂದು ಸೂಚಿಸಿದೆ.

ADVERTISEMENT

ಸಾರ್ವಜನಿಕ ಪ್ರದೇಶ, ರಸ್ತೆಗಳು, ಶಾಲಾ, ಕಾಲೇಜು, ಆಸ್ಪತ್ರೆ ಆವರಣ, ಉದ್ಯಾನ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ನೀಡಬಾರದು. ಜಿಲ್ಲಾಡಳಿತ, ಸ್ಥಳೀಯ ಆಡಳಿತಗಳು ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಬಲಿ ನೀಡಬಹುದು. ಬಲಿ ನೀಡುವಾಗ ಶುಚಿತ್ವ, ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಪ್ರಾಣಿ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕೋವಿಡ್‌ ನಿಯಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸ್ಥಳೀಯ ಆಡಳಿತ, ಪೊಲೀಸರು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನೀಡುವ ಸಾಮಾನ್ಯ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಅಲ್ಪ ಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆ ಅಧೀನ ಕಾರ್ಯದರ್ಶಿ ಮಹಿಬೂಬ ಸಾಬ ಆದೇಶ ಹೊರಡಿಸಿದ್ದಾರೆ.

ಬೃಹತ್‌ ಬೆಂಗಳೂರು ನಗರ ಪಾಲಿಕೆಯೂ ಪ್ರತ್ಯೇಕ ಆದೇಶ ಹೊರಡಿಸಿದ್ದು, ಪ್ರಾಣಿ ಬಲಿ ನಿಷೇಧಿಸಿದೆ. ಕಾನೂನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಪ್ರಾಣಿ ಬಲಿ ತಡೆ ಕಾಯ್ದೆಯ ಅನ್ವಯ 6 ತಿಂಗಳ ಶಿಕ್ಷೆ, ಭಾರತೀಯ ದಂಡ ಸಂಹಿತೆ ಅನ್ವಯ 5 ವರ್ಷಗಳ ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿದೆ.

ಪ್ರಾಣಿವಧೆ ಕಾಯ್ದೆಯ ಅನ್ವಯ ಆಹಾರಕ್ಕೆ ಯೋಗ್ಯವಾದ ಪ್ರಾಣಿಗಳನ್ನು ಅಧಿಕೃತ ಖಾಸಾಯಿ ಖಾನೆಗಳಲ್ಲಿ ಮಾತ್ರ ವಧೆ ಮಾಡುವಂತೆ ಮುಖ್ಯ ಆಯುಕ್ತರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.