ಬೆಂಗಳೂರು: ಮಂಡ್ಯದಲ್ಲಿ ಇದೇ 29ರಂದು ‘ಸ್ವಾಭಿಮಾನದ ವಿಜಯೋತ್ಸವ’ ಆಚರಿಸಲಾಗುವುದು ಎಂದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸುಮಲತಾ ಅಂಬರೀಷ್ ತಿಳಿಸಿದರು.
ಚಿತ್ರನಟ ಅಂಬರೀಶ್ ಅವರ 6ನೇ ತಿಂಗಳ ಪುಣ್ಯತಿಥಿ ಅಂಗವಾಗಿ ಕಂಠೀರವ ಸ್ಟುಡಿಯೋದಲ್ಲಿನ ಅವರ ಸಮಾಧಿಯ ದರ್ಶನ ಪಡೆದ ಸುಮಲತಾ, ಸಂಸತ್ ಸದಸ್ಯ ಸ್ಥಾನದ ಪ್ರಮಾಣ ಪತ್ರವನ್ನು ಸಮಾಧಿಗೆ ಅರ್ಪಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
ಮೇ 29ರಂದುದಿವಂಗತ ಅಂಬರೀಷ್ ಅವರ ಹುಟ್ಟುಹಬ್ಬ. ಅಂದೇ ಅವರ ಅಭಿಮಾನಿಗಳ ಸಮ್ಮುಖದಲ್ಲಿ ವಿಜಯೋತ್ಸವ ಆಚರಿಸಲಾಗುವುದು ಎಂದು ಹೇಳಿದರು.
‘ಯಾವ ಪಕ್ಷಕ್ಕೆ ಬೆಂಬಲ’ ಎಂಬ ಪ್ರಶ್ನೆಗೆ ಉತ್ತರಿಸಲು ಸುಮಲತಾ ನಿರಾಕರಿಸಿದರು. ‘ಸರ್ಕಾರ ಬೀಳಲು ಮಂಡ್ಯ ಫಲಿತಾಂಶ ಕಾರಣವಾಗಲಿದೆ ಎಂಬ ಮಾತುಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸರ್ಕಾರ ಪತನ ಕುರಿತಾದ ಮಾತುಗಳು ಚುನಾವಣೆಗೂ ಮುನ್ನವೇ ಕೇಳಿ ಬಂದಿದ್ದವು. ಹೀಗಾಗಿ ನನಗೂ ಅದಕ್ಕೂ ಸಂಬಂಧವಿಲ್ಲ’ ಎಂದರು.
‘ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಮಂಡ್ಯದ ಜನತೆ ಸ್ವಾಭಿಮಾನಕ್ಕೆ ತಲೆಬಾಗಿದ್ದಾರೆ. ಇತಿಹಾಸ ನಿರ್ಮಿಸಿರುವುದು ಕ್ಷೇತ್ರದ ಜನರೇ ಹೊರತು ನಾನಲ್ಲ’ ಎಂದು ಹೇಳಿದರು.
‘ಜೆಡಿಎಸ್ ನಾಯಕರು ನನ್ನನ್ನು ಮನಬಂದಂತೆ ಹಂಗಿಸಿದರು. ಕಾಂಗ್ರೆಸ್ನವರು ಕೈ ಹಿಡಿಯಲಿಲ್ಲ. ಆದರೂ ಮಂಡ್ಯ ಜನರ ಮೇಲೆ ನನಗೆ ವಿಶ್ವಾಸವಿತ್ತು. ಜಿಲ್ಲೆಯಾದ್ಯಂತ ಶೇ 50ರಷ್ಟು ಮಹಿಳೆಯರು ಮತ ಚಲಾಯಿಸಿದ್ದಾರೆ ಎಂಬ ಅಂಕಿ ಅಂಶ ತಿಳಿದಾಗಲೇ ಗೆಲುವು ಖಚಿತವಾಗಿತ್ತು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.