
ಮೇಕೆದಾಟು ಪ್ರದೇಶ
ಬೆಂಗಳೂರು: ಮೇಕೆದಾಟು ಸಮತೋಲಿತ ಜಲಾನಯನ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರದ (ಕೆಇಆರ್ಎಸ್) ನಿರ್ದೇಶಕರ ನೇತೃತ್ವದಲ್ಲಿ ತಂಡವನ್ನು ರಚಿಸಿ ರಾಜ್ಯ ಸರ್ಕಾರವು ಆದೇಶಿಸಿದೆ.
ನವೆಂಬರ್ 18ರಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ, ಈ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಒಂದು ಮುಖ್ಯ ಎಂಜಿನಿಯರಿಂಗ್ ಕಚೇರಿ ಮತ್ತು ಒಂದು ಸೂಪರಿಟೆಂಡೆಂಟ್ ಎಂಜಿನಿಯರ್ ಕಚೇರಿಯನ್ನು ಆರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಈ ಹೊಸ ಕಚೇರಿಗಳ ಸ್ಥಾಪನೆ ಮತ್ತು ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಅನುಮತಿ ಅಗತ್ಯವಾಗಿದ್ದು, ಅದಕ್ಕೆ ಸಮಯ ಬೇಕಾಗುತ್ತದೆ. ಹೀಗಾಗಿ ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿಯನ್ನು ಕೆಇಆರ್ಎಸ್ ನಿರ್ದೇಶಕರಿಗೆ ವಹಿಸಲಾಗಿದೆ ಎಂದು ಆದೇಶ ಹೇಳಿದೆ.
ಕೆಇಆರ್ಎಸ್ನ ಈ ತಂಡವು ಉಪ ಮುಖ್ಯ ಎಂಜಿನಿಯರ್ ಮತ್ತು ಅಗತ್ಯ ಸಿಬ್ಬಂದಿಯನ್ನು ಹೊಂದಿರಲಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರವನ್ನು ಕೇಂದ್ರಸ್ಥಾನವಾಗಿಸಿಕೊಂಡು ಕಾರ್ಯನಿರ್ವಹಿಸಲಿದೆ. ರಾಮನಗರದಲ್ಲಿಯೇ ಮೇಕೆದಾಟು ಯೋಜನೆಯ ಕಚೇರಿಯನ್ನು ಸ್ಥಾಪಿಸಲಾಗುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಕಾವೇರಿ ನೀರಾವರಿ ನಿಗಮವು ಮೇಕೆದಾಟು ಯೋಜನೆಯ ಕಚೇರಿಯ ಕಟ್ಟಡದ ವ್ಯವಸ್ಥೆ ಮಾಡಲಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರ ಅಧೀನದಲ್ಲಿ ಈ ಕಚೇರಿ ಕಾರ್ಯನಿರ್ವಹಿಸಲಿದೆ. ಕಚೇರಿ ನಿರ್ವಹಣೆ, ಮೂಲಸೌಕರ್ಯ, ಇತರೆ ವೆಚ್ಚಗಳನ್ನು ನಿಗಮವೇ ಭರಿಸಲಿದೆ. ಆದರೆ ಮೇಕೆದಾಟು ಯೋಜನೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಕೆಇಆರ್ಎಸ್ ನಿರ್ದೇಶಕರಿಗೆ ಹಸ್ತಾಂತರಿಸಿ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ.
ಮೇಕೆದಾಟು ಯೋಜನೆ ಅನುಷ್ಠಾನ ತಂಡವು ಉಪ ಮುಖ್ಯ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್, ಮೂವರು ತಾಂತ್ರಿಕ ಸಹಾಯಕರು, ಆರು ಸಹಾಯಕ ಎಂಜಿನಿಯರ್, ಒಬ್ಬ ಸಹಾಯಕ ಆಡಳಿತಾಧಿಕಾರಿ, ಒಬ್ಬ ಲೆಕ್ಕಾಧಿಕಾರಿ, ಸೂಪರಿಟೆಂಡೆಂಟ್, ಪ್ರಥಮ ದರ್ಜೆ ಲೆಕ್ಕ ಸಹಾಯಕ, ಇಬ್ಬರು ಪ್ರಥಮ ದರ್ಜೆ ಸಹಾಯಕರು, ಒಬ್ಬ ದ್ವಿತೀಯ ದರ್ಜೆ ಲೆಕ್ಕ ಸಹಾಯಕ, ನಾಲ್ವರು ದ್ವಿತೀಯ ದರ್ಜೆ ಸಹಾಯಕ, ಒಬ್ಬ ಶೀಘ್ರಲಿಪಿಗಾರರು, ನಾಲ್ವರು ಬೆರಳಚ್ಚುಗಾರರು, ಒಬ್ಬ ವಾಹನ ಚಾಲಕ, ಇಬ್ಬರು ಗ್ರೂಪ್ 'ಡಿ' ಸಿಬ್ಬಂದಿ ಮತ್ತು ಕಾವಲುಗಾರರನ್ನು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.