ಬೆಳಗಾವಿ: ‘ಗಡಿ ವಿಷಯದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ ತಮ್ಮ ಸ್ವಾರ್ಥಕ್ಕಾಗಿ ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ. ಮರಾಠಿ–ಕನ್ನಡ ಭಾಷಿಕರ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಅವರು ಮಾಡಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿಯ ಎಂಇಎಸ್ ಬೆಂಬಲಿತ ಸದಸ್ಯರು ಕಿಡಿಕಾರಿದರು.
ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮುತಗಾ ಕ್ಷೇತ್ರದ ಸದಸ್ಯ ಸುನೀಲ ಅಷ್ಟೇಕರ, ‘ಗಡಿ ಭಾಗದಲ್ಲಿ ಮರಾಠಿ ಹಾಗೂ ಕನ್ನಡ ಭಾಷಿಕರು ಸಹಬಾಳ್ವೆಯಿಂದ ಬದುಕುತ್ತಿದ್ದೇವೆ. ಆದರೆ, ಸವದಿ ಮತ್ತು ಭೀಮಾಶಂಕರ ವಿವಾದಾತ್ಮಕ ಹೇಳಿಕೆ ನೀಡಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಇದರಿಂದ ಮರಾಠಿಗರಿಗೆ ಅವಮಾನವೂ ಆಗಿದೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕು’ ಒತ್ತಾಯಿಸಿದರು. ಇದಕ್ಕೆ ಎಂಇಎಸ್ ಬೆಂಬಲಿತ ಇತರ ಸದಸ್ಯರು ದನಿಗೂಡಿಸಿದರು.
‘ಗಡಿ ವಿಚಾರದಲ್ಲಿ ಮರಾಠಿಗರನ್ನು ಏಕೆ ಗುರಿ ಮಾಡುತ್ತಿದ್ದಾರೆ? ಪ್ರತಿ ಬಾರಿಯೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಮ್ಮನ್ನು ಬಲಿಪಶು ಮಾಡುತ್ತಿದ್ದಾರೆ. ಇದನ್ನು ವಿರೋಧಿಸುತ್ತೇವೆ’ ಎಂದರು.
ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ‘ಗಡಿ ವಿವಾದ ಸುಪ್ರೀಂ ಕೋರ್ಟ್ನಲ್ಲಿದೆ. ಬೆಳಗಾವಿಯಲ್ಲಿ ಮರಾಠಿಗರು ಹಾಗೂ ಕನ್ನಡಿಗರು ಸಹೋದರರಂತೆ ಇದ್ದೇವೆ. ಮುಂದೆಯೂ ಹಾಗೆಯೇ ಇರೋಣ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೊದಲು ಹೇಳಿಕೆ ನೀಡಿದ್ದರಿಂದ ಇಲ್ಲಿನ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಬೇಡಿ’ ಎಂದು ಸಮಾಧಾನಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.