ADVERTISEMENT

ಮೆಟ್ರೊ: ಮತ್ತೆ ತಾಂತ್ರಿಕ ದೋಷ

ಮಹಾಕವಿ ಕುವೆಂಪು ರಸ್ತೆ– ಶ್ರೀರಾಂಪುರ ನಿಲ್ದಾಣ ನಡುವೆ ಮತ್ತೆ ಸ್ಥಗಿತಗೊಂಡಿದ್ದ ರೈಲು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 20:11 IST
Last Updated 4 ನವೆಂಬರ್ 2019, 20:11 IST
   

ಬೆಂಗಳೂರು: ‘ನಮ್ಮ ಮೆಟ್ರೊ’ ರೈಲು ತಾಂತ್ರಿಕ ದೋಷದಿಂದ ಪದೇ ಪದೇ ಸ್ಥಗಿತಗೊಳ್ಳುವುದು ಮುಂದುವರಿದಿದೆ. ಹೀಗೆ ದಿಢೀರನೇ ರೈಲು ಸ್ಥಗಿತಗೊಳ್ಳಲು ಕಾರಣವೇನು ಎಂಬುದರ ಬಗ್ಗೆ ಪ್ರಯಾಣಿಕರಿಗೆ ಯಾವುದೇ ಮಾಹಿತಿಯನ್ನೂ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ನೀಡಿಲ್ಲ.

‘ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಬರುವ ಮಹಾಕವಿ ಕುವೆಂಪು ರಸ್ತೆ ನಿಲ್ದಾಣ ಹಾಗೂ ಶ್ರೀರಾಂಪುರ ನಿಲ್ದಾಣಗಳ ನಡುವೆ ಸೋಮವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ರೈಲನ್ನು ನಿಲ್ಲಿಸಲಾಯಿತು. ನಾಯಿ ಎದುರಿಗೆ ಬಂದಾಗ ದಿಢೀರ್‌ ಎಂದು ವಾಹನಗಳ ಬ್ರೇಕ್‌ ಹಾಕುವಂತೆ, ರೈಲು ದಿಢೀರನೇ ನಿಂತು ಬಿಟ್ಟಿತು’ ಎಂದು ಪ್ರಯಾಣಿಕ ಶ್ರೀಕಂಠ ಹೇಳಿದರು.

‘ಬೆಳಿಗ್ಗೆ 10ರಿಂದ 10.20 ನಡುವೆ ಸುಮಾರು 7 ರಿಂದ 8 ನಿಮಿಷ ದವರೆಗೆ ರೈಲು ಈ ಸ್ಥಳದಲ್ಲಿ ನಿಂತಿತ್ತು. ನಿಲ್ದಾಣದಲ್ಲಿ ಹೀಗೆ ಸ್ಥಗಿತಗೊಂಡಿದ್ದರೆ ಹೆಚ್ಚು ಆತಂಕವಾಗುತ್ತಿರಲಿಲ್ಲ. ಆದರೆ, ನಿಲ್ದಾಣಗಳ ನಡುವೆ ದಿಢೀರನೇ ನಿಂತಿದ್ದರಿಂದ ಭಯವಾಯಿತು. ಆದರೆ, ಈ ಬಗ್ಗೆ ಮೆಟ್ರೊ ರೈಲಿನಲ್ಲಿ ಯಾವುದೇ ಮಾಹಿತಿ ನೀಡಲಿಲ್ಲ’ ಎಂದು ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.