ಬೆಂಗಳೂರು: ಗ್ರಾಮೀಣ ಪ್ರದೇಶವನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಬಯಸುವ ಆಸಕ್ತ ಅಭ್ಯರ್ಥಿಗಳಲ್ಲಿ ಅದಕ್ಕೆ ಬೇಕಾದ ಕೌಶಲವನ್ನು ಬೆಳೆಸಲಿ ಕೇಂದ್ರ ಸರ್ಕಾರವು ‘ಮಹಾತ್ಮ ಗಾಂಧಿ ರಾಷ್ಟ್ರೀಯ ಫೆಲೋಶಿಪ್’ ನೀಡುತ್ತಿದೆ.
ಕೇಂದ್ರ ಸರ್ಕಾರದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಹಾಗೂ ರಾಜ್ಯ ಕೌಶಲ ಅಭಿವೃದ್ಧಿ ಮಿಷನ್ ಸಹಯೋಗದಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದ್ದು, ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆಯು (ಐಐಎಂಬಿ) ಸಾಮಾನ್ಯ ಪ್ರವೇಶ ಪ್ರಕ್ರಿಯೆಯ ಜವಾಬ್ದಾರಿ ಹೊತ್ತಿದೆ. ದೇಶದ 9 ಐಐಎಂಗಳ ಮೂಲಕ ಎರಡನೇ ಹಂತದಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ.
‘ಆಯ್ಕೆಯಾದ ಅಭ್ಯರ್ಥಿಗಳಿಗೆ ಐಐಎಂನಲ್ಲಿ ತರಬೇತಿ ನೀಡಲಾಗುತ್ತದೆ. ನಿರ್ವಹಣಾ ತತ್ವಗಳು, ಆರ್ಥಿಕ ಅಭಿವೃದ್ಧಿ, ಸಾರ್ವಜನಿಕ ನೀತಿ ಮತ್ತು ಕೌಶಲ ಅಭಿವೃದ್ಧಿ ಬಗ್ಗೆ ಹೇಳಿಕೊಡಲಾಗುವುದು’ ಎಂದು ಐಐಎಂಬಿ ನಿರ್ದೇಶಕ ಪ್ರೊ.ರಿಷಿಕೇಶ ಟಿ. ಕೃಷ್ಣ ಹೇಳಿದರು.
‘ಮೊದಲನೇ ಹಂತದಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ 15 ಅಭ್ಯರ್ಥಿಗಳಿಗೆ ಈ ಫೆಲೋಶಿಪ್ ನೀಡಲಾಗುತ್ತಿದೆ. ಈ ವರ್ಷ ಉಳಿದ 15 ಜಿಲ್ಲೆಗಳಿಗೆ ತಲಾ ಒಬ್ಬರಂತೆ 15 ಅಭ್ಯರ್ಥಿಗಳನ್ನು ಫೆಲೋಶಿಪ್ಗೆ ಆಯ್ಕೆ ಮಾಡಿಕೊಳ್ಳಲಾಗುವುದು’ ಎಂದು ಈ ಫೆಲೋಶಿಪ್ನ ಯೋಜನಾ ನಿರ್ದೇಶಕರಾದ ಪ್ರೊ.ಎಸ್. ಬಸು ಮತ್ತು ಪ್ರೊ. ಅರ್ನಬ್ ಮುಖರ್ಜಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.