ಜೈಲು (ಪ್ರಾಧಿನಿಧಿಕ ಚಿತ್ರ)
ಐಸ್ಟಾಕ್ ಚಿತ್ರ
ಬೆಂಗಳೂರು: ಸಾಲಗಾರರಿಗೆ ಹಿಂಸೆ, ಕಿರುಕುಳ ನೀಡುವ ಮೈಕ್ರೊ ಫೈನಾನ್ಸ್ ಕಂಪನಿಗಳು ಅಥವಾ ಲೇವಾದೇವಿದಾರರಿಗೆ ಮೂರು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ₹1 ಲಕ್ಷ ದಂಡ ವಿಧಿಸಲು ಅವಕಾಶ ಕಲ್ಪಿಸುವ ಕಾಯ್ದೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ.
ಈ ಉದ್ದೇಶದಿಂದ ‘ಕರ್ನಾಟಕ ಮೈಕ್ರೊ ಫೈನಾನ್ಸ್ ಕಂಪನಿಗಳು (ಹಣ ಲೇವಾದೇವಿ ನಿಯಂತ್ರಣ) ಮಸೂದೆ– 2025’ ಅನ್ನು ಸಿದ್ಧಪಡಿಸಿದೆ. ಇದರ ಕರಡು ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಮಸೂದೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ತಕ್ಷಣದಿಂದಲೇ ಜಾರಿಗೆ ತರಲು ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಮುಂದಾಗಿದೆ.
ರಾಜ್ಯದೊಳಗೆ ಸಾಲದ ವಹಿವಾಟು ನಡೆಸುವ ಎಲ್ಲ ಕಂಪನಿಗಳೂ ರಾಜ್ಯ ಸರ್ಕಾರದ ‘ನೋಂದಣಿ ಪ್ರಾಧಿಕಾರ’ದಲ್ಲಿ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವವೂ ಮಸೂದೆಯಲ್ಲಿದೆ. ನೋಂದಣಿ ಮಾಡದೇ ವಹಿವಾಟು ನಡೆಸುವ ಸಾಲದಾತರಿಗೆ ಮೂರು ವರ್ಷದವರೆಗೆ ವಿಸ್ತರಿ ಸಬಹುದಾದ ಜೈಲು ಮತ್ತು ₹1 ಲಕ್ಷದವರೆಗೆ ವಿಸ್ತರಿಸಬಹುದಾದ ದಂಡ ವಿಧಿಸುವುದಕ್ಕೂ ಮಸೂದೆ ಅವಕಾಶ ಕಲ್ಪಿಸಿದೆ.
ಮೈಕ್ರೊ ಫೈನಾನ್ಸ್ ಕಂಪನಿಗಳು ಅಥವಾ ಲೇವಾದೇವಿದಾರರ ಪ್ರತಿನಿಧಿಗಳು ಸಾಲಗಾರರ ಮೇಲೆ ನಡೆಸುತ್ತಿರುವ ದೌರ್ಜನ್ಯ ಪ್ರಕರಣಗಳು ರಾಜ್ಯದಾದ್ಯಂತ ವರದಿಯಾ ಗುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ. 25ರಂದು ಉನ್ನತಮಟ್ಟದ ಸಭೆ ನಡೆಸಿದ್ದರು. ಅಲ್ಲದೆ, ಸಾಲ ಪಡೆಯುವವರ ಹಿತ ಕಾಪಾಡಲು ಸುಗ್ರೀವಾಜ್ಞೆ ಮೂಲಕ ತಕ್ಷಣವೇ ಕಾನೂನು ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದ್ದರು.
ಈ ಕಾನೂನು ಜಾರಿಗೆ ಬಂದ 30 ದಿನಗಳ ಒಳಗೆ ರಾಜ್ಯದಲ್ಲಿ ಕಾರ್ಯನಿರ್ವ ಹಿಸುವ ಎಲ್ಲ ಮೈಕ್ರೊ ಫೈನಾನ್ಸ್ ಕಂಪನಿಗಳು, ಲೇವಾದೇವಿಗಾರರು ‘ನೋಂದಣಿ
ಪ್ರಾಧಿಕಾರ’ದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹೀಗೆ ನೋಂದಾಯಿಸುವ ಸಂದರ್ಭದಲ್ಲಿ ಸಾಲಕ್ಕೆ ವಿಧಿಸುವ ಬಡ್ಡಿ, ಸಾಲ ವಸೂಲು ಮಾಡುವ ಪದ್ಧತಿ ಸೇರಿದಂತೆ ಎಲ್ಲ ವಿವರಗಳನ್ನು ಕಡ್ಡಾಯವಾಗಿ ನೀಡಬೇಕು.
ನೋಂದಣಿ ವೇಳೆ ನೀಡಿದ ಮಾಹಿತಿಗಳನ್ನು ಪರಿಶೀಲಿಸಿದ ಬಳಿಕ, ಸರ್ಕಾರ ರೂಪಿಸಿದ ಕಾನೂನಿಗೆ ಬದ್ಧವಾಗಿರುವುದಾಗಿ ಲಿಖಿತವಾಗಿ ಮುಚ್ಚಳಿಕೆ ಬರೆಯಿಸಿಕೊಂಡು ಎರಡು ವರ್ಷ ಕಾರ್ಯನಿರ್ವಹಿಸಲು ನೋಂದಣಿ ಪ್ರಾಧಿಕಾರವು ಅನುಮತಿ ನೀಡಲಿದೆ. ಎರಡು ವರ್ಷಗಳ ಅವಧಿ ಮುಗಿಯುವ 60 ದಿನಗಳ ಮೊದಲು ನೋಂದಣಿ ಮರು ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಪರಿಶೀಲಿಸಿ ನೋಂದಣಿ ನವೀಕರಿಸಬೇಕೇ, ಬೇಡವೇ ಎಂದು ಎರಡು ವರ್ಷ ಮುಗಿಯುವುದಕ್ಕೆ15 ದಿನಗಳ ಮೊದಲು ಪ್ರಾಧಿಕಾರವು ನಿರ್ಧರಿಸಲಿದೆ ಎಂದೂ ಮಸೂದೆ ಹೇಳಿದೆ.
ಸಾಲ ಪಡೆದವರಿಂದ ಬಂದ ದೂರುಗಳ ಆಧಾರದಲ್ಲಿ ಅಥವಾ ಸ್ವಯಂಪ್ರೇರಿತವಾಗಿ
ಮೈಕ್ರೊ ಫೈನಾನ್ಸ್ ಕಂಪನಿಗಳು, ಲೇವಾದೇವಿಗಾರರ ನೋಂದಣಿಯನ್ನು ಯಾವುದೇ ನೋಟಿಸ್ ನೀಡದೆ ರದ್ದುಪಡಿಸಲು ಕೂಡಾ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಸಾಲ ವಸೂಲಿ ಸಂದರ್ಭದಲ್ಲಿ ಆರ್ಬಿಐ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಒಬ್ಬ ಸಾಲಗಾರ ಎರಡು ಸಂಸ್ಥೆಗಳಿಂದ ಮಾತ್ರ ಸಾಲ ಪಡೆಯಬಹುದು. ಸಾಲದ ಒಟ್ಟು ಮೊತ್ತ ₹2 ಲಕ್ಷ ಮೀರುವಂತಿಲ್ಲ.
ಪ್ರತಿಯೊಂದು ಮೈಕ್ರೊ ಫೈನಾನ್ಸ್ ಕಂಪನಿಯು, ಲೇವಾದೇವಿಗಾರರು ಪ್ರತಿ ತಿಂಗಳ ವ್ಯವಹಾರದ ಸಂಪೂರ್ಣ ಮಾಹಿತಿಯನ್ನು ಪ್ರತಿ ತಿಂಗಳ 10ನೇ ತಾರೀಕಿನಂದು ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಜೊತೆಗೆ ಸಾಲ ಪಡೆದವರ ವಿವರ ಮತ್ತು ಬಡ್ಡಿ ದರವನ್ನೂ ತಿಳಿಸಬೇಕು. ಕಾನೂನು ಪ್ರಕಾರವೇ ಸಾಲ ನೀಡುವ ವ್ಯವಹಾರ ನಡೆಯುತ್ತಿದೆಯೇ ಎಂಬುದನ್ನು ಪ್ರಾಧಿಕಾರ ಪರಿಶೀಲಿಸಲಿದೆ. ಮಾಹಿತಿ ನೀಡದ ಸಂಸ್ಥೆಗಳ ದಾಖಲೆಗಳನ್ನು ಜಪ್ತಿ ಮಾಡುವ ಅಧಿಕಾರವೂ ಪ್ರಾಧಿಕಾರಕ್ಕೆ ಇರಲಿದೆ ಎಂಬ ಉಲ್ಲೇಖ ಮಸೂದೆಯಲ್ಲಿದೆ.
ಯಾರೆಲ್ಲ ಮಸೂದೆ ವ್ಯಾಪ್ತಿಗೆ?
*ದಿನ, ವಾರ, ತಿಂಗಳು ಮತ್ತು ವರ್ಷದ ಆಧಾರದಲ್ಲಿ ಬಡ್ಡಿಗೆ ಸಾಲ ಕೊಡುವವರು
*ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಮೈಕ್ರೊ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರ ಏಜೆನ್ಸಿಗಳು, ಸಂಸ್ಥೆಗಳು, ವ್ಯಕ್ತಿಗಳು
*ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ನೋಂದಾಯಿತವಾದ ಮತ್ತು ನೋಂದಣಿ ಆಗದಿರುವ ಹಣಕಾಸು ಸಂ
ತ್ವರಿತ ನ್ಯಾಯಾಲಯ ಸ್ಥಾಪನೆ ಪ್ರಸ್ತಾವ
ಸಾಲಗಾರರು ಮತ್ತು ಸಾಲದಾತರ ನಡುವಿನ ವಾಜ್ಯವನ್ನು ಇತ್ಯರ್ಥಪಡಿಸಲು, ಹೈಕೋರ್ಟ್ ಜೊತೆ ಸಮಾಲೋಚನೆ ನಡೆಸಿ ರಾಜ್ಯ ಸರ್ಕಾರದಿಂದ ಪ್ರತಿ ಜಿಲ್ಲೆಯಲ್ಲಿ ತ್ವರಿತ ನ್ಯಾಯಾಲಯ ಸ್ಥಾಪನೆಗೂ ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ತ್ವರಿತ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳನ್ನು ಸಿವಿಲ್ ಪ್ರಕ್ರಿಯಾ ಸಂಹಿತೆ–1908ರ ಅಡಿಯಲ್ಲಿ ಆರು ತಿಂಗಳ ಒಳಗೆ ಇತ್ಯರ್ಥಪಡಿಸಲು ಯತ್ನಿಸಬೇಕು ಎಂದೂ ಮಸೂದೆಯಲ್ಲಿ ತಿಳಿಸಲಾಗಿದೆ.
ಸಾಲ ಪಡೆಯಲು ಕಾರ್ಮಿಕರಿಗೆ ಮಿತಿ ನಿಗದಿ; ಬಲವಂತದ ವಸೂಲಿಗೆ ನೋಂದಣಿ ರದ್ದು
ಕಾಫಿ ಎಸ್ಟೇಟ್, ಎಣ್ಣೆ ಗಿರಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಾಲ ಪಡೆಯುವ ಮಿತಿ ನಿಗದಿಪಡಿಸಲಾಗಿದ್ದು, ಅವರ ಆದಾಯದ ಮೂಲ ಒಂದೇ ಇದ್ದರೆ ಒಟ್ಟು ₹30 ಸಾವಿರ, ಒಂದಕ್ಕಿಂತ ಹೆಚ್ಚು ಆದಾಯದ ಮೂಲ ಇದ್ದರೆ ಅಂಥವರಿಗೆ ₹50 ಸಾವಿರ ಸಾಲ ಪಡೆಯುವ ಮಿತಿ ನಿಗದಿಪಡಿಸಲಾಗಿದೆ.
ವಿಳಂಬ ಪಾವತಿಗೆ ದಂಡ ವಿಧಿಸುವಂತಿಲ್ಲ. ಸಾಲ ಒಪ್ಪಂದ ಮಾಡಿಕೊಂಡಿರಬೇಕು, ವಿಧಿಸುವ ಬಡ್ಡಿ ದರದ ಮಾಹಿತಿಯನ್ನು ಒಳಗೊಂಡ ಸಾಲ ಮಂಜೂರಾತಿ ಕಾರ್ಡ್ ಅನ್ನು ನೀಡಬೇಕು. ಮೈಕ್ರೊ ಫೈನಾನ್ಸ್ ಕಂಪನಿಗಳು, ಲೇವಾದೇವಿಗಾರರು ಸಾಲ ವಸೂಲಿಗೆ ಏಜೆಂಟರನ್ನು ನಿಯೋಜಿಸುವಂತಿಲ್ಲ. ವಸೂಲಿಗೆ ಮನೆಗೆ ಹೋಗಬಾರದು, ಅಲ್ಲದೆ, ಯಾವುದೇ ಬಲವಂತದ ಕ್ರಮ ಅನುಸರಿಸಬಾರದು. ಸಾಲಗಾರರನ್ನು ಅಥವಾ ಅವರ ಕುಟುಂಬದ ಸದಸ್ಯರನ್ನು ಅವಮಾನ ಮಾಡಬಾರದು. ಈ ರೀತಿಯ ವರ್ತನೆ ತೋರಿಸಿದ ಸಾಲದಾತರ ನೋಂದಣಿಯನ್ನು ರದ್ದುಪಡಿಸಲಾಗುವುದು ಎಂದೂ ಈ ಮಸೂದೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.