ADVERTISEMENT

ಶಿಫಾರಸು ಪರಿಗಣಿಸುವುದಿಲ್ಲ ಎಂಬ ಪ್ರಮಾಣ ಪತ್ರ ಸಲ್ಲಿಸಿ

ಮದ್ಯದ ಅಂಗಡಿ ಉಪಗುತ್ತಿಗೆ: ಎಂಎಸ್‌ಐಎಲ್‌ಗೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 16:34 IST
Last Updated 12 ಆಗಸ್ಟ್ 2020, 16:34 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಮದ್ಯದ ಅಂಗಡಿ ಉಪಗುತ್ತಿಗೆ ನೀಡುವಾಗ ಜನಪ್ರತಿನಿಧಿಗಳ ಶಿಫಾರಸು ಪರಿಗಣಿಸುವುದಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸುವಂತೆ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ಗೆ (ಎಂಎಸ್‌ಐಎಲ್‌) ಹೈಕೋರ್ಟ್‌ ನಿರ್ದೇಶನ ನೀಡಿದೆ.

ಈ ನಡುವೆ ಶಿಫಾರಸು ಪತ್ರ ನೀಡಿ ಅದನ್ನು ವಾಪಸ್ ಪಡೆದ ಪಶುಸಂಗೋಪನಾ ಸಚಿವ ಪ್ರಭು ಬಿ. ಚೌವ್ಹಾಣ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ನಿರ್ಧರಿಸಿತು.

ಬೀದರ್ ಜಿಲ್ಲೆಯಸೋಮನಾಥ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಪೀಠ, ಈ ಹಿಂದಿನ ವಿಚಾರಣೆ ವೇಳೆ ಸಚಿವರನ್ನೂ ಪ್ರತಿವಾದಿಯನ್ನಾಗಿ ಮಾಡುವಂತೆ ಅರ್ಜಿದಾರರಿಗೆ ಸೂಚಿಸಿತ್ತು.

ADVERTISEMENT

‘ಅದು ಶಿಫಾರಸು ಅಲ್ಲ, ಮನವಿಯ ಟಿಪ್ಪಣಿ ಎಂದು ಸಚಿವರು ಅಫಿಡವಿಟ್‌ ಸಲ್ಲಿಸಿದ್ದಾರೆ. ಮನವಿಯಾದರೂ ಅಧಿಕಾರಿಗಳು ಅದನ್ನು ಯಾವ ರೀತಿ ಪರಿಗಣಿಸುತ್ತಾರೆ ಎಂಬುದು ಗೊತ್ತಿದೆ. ಆದರೂ ಅವರ ವಿರುದ್ಧ ಹೆಚ್ಚಿನ ನಿರ್ದೇಶನ ನೀಡುವ ಅಗತ್ಯವಿಲ್ಲ’ ಎಂದು ಪೀಠ ಹೇಳಿತು.

‘ವಿಧಾನಸಭಾ ಕ್ಷೇತ್ರವಾರು ಎಂಎಸ್‌ಐಎಲ್ ಮದ್ಯ ಮಳಿಗೆ ತೆರೆಯುವ ಸಂಬಂಧ ಅಬಕಾರಿ ಇಲಾಖೆ ಹೊರಡಿಸಿದ ಆದೇಶವು ಜನಪ್ರತಿನಿಧಿಗಳು ತಮ್ಮ ಬೆಂಬಲಿಗರಿಗೆ ಪರವಾನಗಿ ಕೊಡಿಸಲು ಅನುಕೂಲವಾಗುತ್ತಿದೆ’ ಎಂದು ಅರ್ಜಿದಾರರು ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.