ಬೆಂಗಳೂರು: ರಾಜ್ಯದ ಮೇಲ್ದರ್ಜೆಗೇರಿಸಿದ 150 ಐಟಿಐಗಳ ಉದ್ಘಾಟನಾ ಶಿಲಾಫಲಕದಲ್ಲಿ ತಮ್ಮ ಹೆಸರಿಲ್ಲದಿರುವ ಬಗ್ಗೆ ವಸತಿ ಸಚಿವ ವಿ.ಸೋಮಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗೋವಿಂದರಾಜ ನಗರದ ಶಾಸಕರೂ ಆಗಿರುವ ಸೋಮಣ್ಣ ಅವರು ಶುಕ್ರವಾರ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಜತೆ ‘ಡಾ.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕ್ಯಾಂಪಸ್’ ಆವರಣದಲ್ಲಿ ಸಿದ್ಧತಾ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಶಿಲಾಫಲಕದಲ್ಲಿ ತಮ್ಮ ಹೆಸರು ಸೇರಿಸದೇ ಇರುವುದನ್ನು ನೋಡಿ ಸಿಟ್ಟಿಗೆದ್ದರು.
ಶಿಲಾಫಲಕದಲ್ಲಿ ಪ್ರಧಾನಿ ನರೇಂದ್ರ ಮೋದಿ,ರಾಜ್ಯಪಾಲ ಥಾವರ ಚಂದ್ ಗೆಹಲೋತ್, ಮುಖ್ಯ
ಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಅಶ್ವತ್ಥನಾರಾಯಣ ಅವರ ಹೆಸರು ಇದ್ದು, ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿರುವ ತಮ್ಮ ಹೆಸರೇ ಇಲ್ಲದಿರುವುದನ್ನು ನೋಡುತ್ತಿದ್ದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಶಿಲಾ ಫಲಕದಲ್ಲಿ ಹೆಸರು ಸೇರಿಸದೇ ಇದ್ದರೆ ಒಡೆದು ಹಾಕುತ್ತೇನೆ. ಇದು ರಾಜ್ಯ ಸರ್ಕಾರ ಹಣದಲ್ಲಿ ನಿರ್ಮಿಸಿದ ಸಂಸ್ಥೆ ಎಂದು ಅಧಿಕಾರಿಗಳಿಗೆ ಹೇಳಿದರು.
ಆಗ ಮಧ್ಯಪ್ರವೇಶಿಸಿದ ಸಚಿವ ಅಶ್ವತ್ಥನಾರಾಯಣ ಅವರು, 150 ಐಟಿಐಗಳನ್ನು ಮೇಲ್ದರ್ಜೆಗೇರಿಸಿದ ಕಾರ್ಯಕ್ರಮ ಪ್ರಧಾನಿಯವರಿಂದ ಇಲ್ಲಿ ಸಾಂಕೇತಿಕವಾಗಿ ಉದ್ಘಾಟಿಸಲಾಗುತ್ತಿದೆ. ಆದ್ದರಿಂದ ಇಲ್ಲಿಗೆ ಶಿಲಾಫಲಕ ತರಲಾಗಿದೆ. ಇದು ಗೋವಿಂದನಗರ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಯಕ್ರಮವಲ್ಲ ಎಂದು ತಿಳಿಸಿದರು. ಇದರಿಂದಸಮಾಧಾನಗೊಂಡ ಸೋಮಣ್ಣ ಅವರು, ಆ ವಿಚಾರ ಗೊತ್ತಿರಲಿಲ್ಲ. ಹಾಗಿದ್ದರೆ ಪರವಾಗಿಲ್ಲ ಬಿಡಿ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.