ADVERTISEMENT

ಬೇಡಿಕೆ ಕುಸಿತ: ಸಿಹಿಗುಂಬಳ ಕೆ.ಜಿಗೆ ಕೇವಲ ₹ 1!

ಕೇರಳದಲ್ಲಿ ನೆಲಕಚ್ಚಿದ ಹೋಟೆಲ್ ಉದ್ಯಮ

ಕೆ.ಎಸ್.ಗಿರೀಶ್
Published 8 ಸೆಪ್ಟೆಂಬರ್ 2021, 1:12 IST
Last Updated 8 ಸೆಪ್ಟೆಂಬರ್ 2021, 1:12 IST
ಮೈಸೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಗಳವಾರ ಅಗ್ಗವಾಗಿ ಸಿಕ್ಕ ಕುಂಬಳಕಾಯಿಯನ್ನು ಗ್ರಾಹಕರೊಬ್ಬರು ಖರೀದಿಸಿದರು
ಮೈಸೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಗಳವಾರ ಅಗ್ಗವಾಗಿ ಸಿಕ್ಕ ಕುಂಬಳಕಾಯಿಯನ್ನು ಗ್ರಾಹಕರೊಬ್ಬರು ಖರೀದಿಸಿದರು   

ಮೈಸೂರು: ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸಿಹಿಗುಂಬಳದ ಕನಿಷ್ಠ ಧಾರಣೆ ಕೆ.ಜಿಗೆ ₹ 1 ಹಾಗೂ ಗರಿಷ್ಠ ಬೆಲೆ ₹ 3ಕ್ಕೆ ಕುಸಿದಿದ್ದು, ರೈತರಲ್ಲಿ ಭಾರಿ ನಿರಾಸೆ ತರಿಸಿದೆ.

ಪ್ರತಿ ದಿನ 700 ಕ್ವಿಂಟಲ್‌ಗೂ ಹೆಚ್ಚು ಸಿಹಿಗುಂಬಳದ ಆವಕ ನಡೆದಿದೆ. ಹಿಂದಿನ ವರ್ಷ ಎಪಿಎಂಸಿಯಲ್ಲಿ ಪ್ರತಿ ಕೆ.ಜಿಗೆ ಸಗಟು ಧಾರಣೆ ₹ 21 ಇತ್ತು.

ಕಳೆದ ತಿಂಗಳು ಕೆ.ಜಿಗೆ ₹ 7ರಿಂದ ₹ 9ರವರೆಗೂ ದರವಿತ್ತು. ಜುಲೈನಲ್ಲಿ ದರ ₹ 18ರವರೆಗೂ ತಲುಪಿತ್ತು. ಆದರೆ, ಸೆಪ್ಟೆಂಬರ್ ಆರಂಭದಿಂದಲೂ ಬೆಲೆ ₹ 1ರಿಂದ ₹ 3ರವರೆಗೆ ಮಾತ್ರವೇ ಎಪಿಎಂಸಿಯಲ್ಲಿ ನಿಗದಿಯಾಗುತ್ತಿದ್ದು, ರೈತರಿಗೆ ಅತೀವ ನಷ್ಟ ಉಂಟಾಗಿದೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಂಜನಗೂಡಿನ ರೈತ ಕೆಂಡಗಣ್ಣಸ್ವಾಮಿ, ‘ ಸಿಹಿಗುಂಬಳ ಖರೀದಿಸಲು ವ್ಯಾಪಾರಿಗಳು ಬರುತ್ತಿಲ್ಲ. ಮಧ್ಯವರ್ತಿಗಳು ಕರುಣೆ ಇಲ್ಲದೆ ಕಡಿಮೆ ದರ ನಿಗದಿ ಮಾಡಿದ್ದಾರೆ. ಅದರಿಂದ ನಮಗೆ ಸಾಗಾಣಿಕೆ ವೆಚ್ಚವೂ ಸಿಗುವುದಿಲ್ಲ. ಹೊಲದಲ್ಲೇ ಕುಂಬಳವನ್ನು ಬಿಡುವೆ, ಮಾರುಕಟ್ಟೆಗೆ ತರುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ದರ ಕುಸಿತ ಏಕೆ?: ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರು
ವುದರಿಂದ ಹೆಚ್ಚಿನ ನಿರ್ಬಂಧಗಳನ್ನು ಅಲ್ಲಿನ ಸರ್ಕಾರ ವಿಧಿಸಿದೆ. ಪ್ರವಾಸೋದ್ಯಮ, ಹೋಟೆಲ್ ಉದ್ಯಮಗಳು ನೆಲಕಚ್ಚಿವೆ. ಇಲ್ಲಿನ ಸಿಹಿಗುಂಬಳಕ್ಕೆ ಕೇರಳದ ಹೋಟೆಲ್‌ ಮಾಲೀಕರೆ ಪ್ರಮುಖ ಗ್ರಾಹಕರು. ಆದರೆ, ಅಲ್ಲಿ ವಹಿವಾಟು ನೀರಸವಾಗಿರುವುದರಿಂದ ಬೇಡಿಕೆ ಇಲ್ಲವಾಗಿದೆ.

20 ದಿನ ಸಂಗ್ರಹ: ‘ಸಿಹಿಗುಂಬಳವನ್ನು ತಕ್ಷಣವೇ ರೈತರು ಕಟಾವು ಮಾಡದೇ ಕಾದು ನೋಡುವ ತಂತ್ರ ಅನುಸರಿಸಬಹುದು’ ಎಂದು ತೋಟಗಾರಿಕಾ ಇಲಾಖೆ ಮನವಿ ಮಾಡಿದೆ.

‘ಗಿಡದಲ್ಲೇ ಸುಮಾರು 10 ದಿನ, ಕಟಾವು ಮಾಡಿದ ನಂತರ 10 ದಿನಗಳ ಕಾಲ ಇಟ್ಟರೂ ಕೊಳೆಯು
ವುದಿಲ್ಲ. ಮುಂದೆ ಬೇಡಿಕೆ ಸೃಷ್ಟಿಯಾದಾಗ ಮಾರಾಟ ಮಾಡಬಹುದು. ಆದ್ದರಿಂದ ರೈತರು ತಾಳ್ಮೆಯಿಂದ ಇರಬೇಕು’ ಎಂದು ಇಲಾಖೆಯ ಉಪನಿರ್ದೇಶಕ ಕೆ.ರುದ್ರೇಶ್ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.