ADVERTISEMENT

ವನ್ಯಜೀವಿ ಮಂಡಳಿಗೆ ಗಣಿ ಉದ್ಯಮಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 19:45 IST
Last Updated 4 ಫೆಬ್ರುವರಿ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೇಲೆಕೇರಿ ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿಯಲ್ಲಿ ಹೆಸರು ಉಲ್ಲೇಖವಾಗಿ ರುವ ಉದ್ಯಮಿಯೊಬ್ಬರನ್ನು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಬಿ.ಎಂ. ಕಾಡಯ್ಯ, ರಾಮಚಂದ್ರ ಶೆಟ್ಟಿ, ಸಂತೃಪ್ತ್, ಕೆ.ಶ್ಯಾಮರಾಜು ಅವರ ಸದಸ್ಯತ್ವವನ್ನು ರದ್ದುಗೊಳಿಸಿರುವ ಇಲಾಖೆ, ಆ ಸ್ಥಾನಗಳಿಗೆ ನವೀನ್‌ ಜೆ.ಎಸ್‌., ಅಲೋಕ್‌ ವಿಶ್ವನಾಥ್‌, ಚೇತನ ಬಿ. ಹಾಗೂ ದಿನೇಶ್ ಸಿಂಘಿ ಅವರನ್ನು ನೇಮಕ ಮಾಡಿದೆ. ದಿನೇಶ್‌ ಸಿಂಘಿ ಅವರು ಬಳ್ಳಾರಿಯ ಭಾರತ್‌ ಮೈನ್ಸ್‌ ಆ್ಯಂಡ್‌ ಮಿನರಲ್ಸ್‌ನ (ಬಿಎಂಎಂ) ಮಾಲೀಕರು. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ಒತ್ತಡಕ್ಕೆ ಮಣಿದು ಈ ನೇಮಕ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. ಅಕ್ರಮಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತಂಡವು ರಾಜ್ಯ ಸರ್ಕಾರಕ್ಕೆ 2011ರಲ್ಲಿ ಎರಡನೇ ವರದಿ ಸಲ್ಲಿಸಿತ್ತು. 16,368 ಟನ್‌ ಅದಿರು ಸಾಗಣೆಗೆ ಅನುಮತಿ ಪಡೆದಿದ್ದ ಬಿಎಂಎಂ ಸಂಸ್ಥೆಯು 1,27,566 ಟನ್‌ ಅದಿರನ್ನು ನಿಯಮಬಾಹಿರವಾಗಿ ಸಾಗಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಬಂದರಿನಿಂದ 21 ಲಕ್ಷ ಟನ್‌­ಗಳಷ್ಟು ಕಬ್ಬಿಣದ ಅದಿರನ್ನು ಅಕ್ರಮ­ವಾಗಿ ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿ­ಸಿದಂತೆ 10 ನಗರಗಳ 19 ಕಡೆ ಸಿಬಿಐ 2014ರ ಫೆಬ್ರುವರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಅಧಿಕಾರಿಗಳು ಬಿಎಂಎಂ ಕಚೇರಿ ಮೇಲೆ ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸಿದ್ದರು.

ADVERTISEMENT

ಹುಲಿ ಸಂರಕ್ಷಿತ ಅರಣ್ಯ, ರಾಷ್ಟ್ರೀಯ ಉದ್ಯಾನಗಳು ಹಾಗೂ ಇತರ ಸಂರಕ್ಷಿತ ಪ್ರದೇಶಗಳ ಸುತ್ತಮುತ್ತ ಗಣಿಗಾರಿಕೆ, ಅಣೆಕಟ್ಟೆ ನಿರ್ಮಾಣದಂತಹ ಅರ್ಜಿಗಳು ಬಂದಾಗ ವನ್ಯಜೀವಿ ಮಂಡಳಿ ಪರಿಶೀಲನೆ ನಡೆಸುತ್ತದೆ. ಆ ಮಂಡಳಿಗೆ ಗಣಿ ಉದ್ಯಮಿಯನ್ನೇ ನೇಮಿಸಿರುವು ದರಿಂದ ಹಿತಾಸಕ್ತಿ ಸಂಘರ್ಷಕ್ಕೆ ಅವಕಾಶ ಕಲ್ಪಿಸಿದಂತಾಗಿದೆ ಎಂಬ ಅಭಿಪ್ರಾಯ ವನ್ಯಜೀವಿ ಕಾರ್ಯಕರ್ತರಿಂದ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಿಂಘಿ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.