ಬೆಂಗಳೂರು: ಕರ್ನಾಟಕ ಸರ್ಕಾರವು ಸದ್ಯದಲ್ಲೇ ‘ವಿನ್ಯಾಸ(ಡಿಸೈನ್) ನೀತಿ’ಯನ್ನು ಜಾರಿಗೆ ತರಲಿದ್ದು, ಈ ವರ್ಷದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ (ಬಿಟಿಎಸ್) ಜತೆಯಲ್ಲೇ ‘ಬೆಂಗಳೂರು ಡಿಸೈನ್ ಫೆಸ್ಟಿವಲ್’ ಅನ್ನು ಕೂಡಾ ಆಯೋಜಿಸಲಿದೆ. ಅಲ್ಲದೆ, ವಿನ್ಯಾಸದ ಕುರಿತ ಚಿಂತನೆ ಮತ್ತು ಜಾಗೃತಿಯನ್ನು ಶಾಲಾ– ಕಾಲೇಜುಗಳ ಪಠ್ಯಕ್ರಮದಲ್ಲೇ ಅಳವಡಿಸಲಾಗುವುದು ಎಂದು ಐಟಿ– ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಲಂಡನ್ನಲ್ಲಿವರ್ಲ್ಡ್ ಡಿಸೈನ್ ಕೌನ್ಸಿಲ್ (ಡಬ್ಲ್ಯುಡಿಸಿ), ವರ್ಲ್ಡ್ ಡಿಸೈನ್ ಆರ್ಗನೈಸೇಶನ್ (ಡಬ್ಲ್ಯುಡಿಓ) ಮತ್ತುಯುನೈಟೆಡ್ ಕಿಂಗ್ಡಂ ಡಿಸೈನ್ ಕೌನ್ಸಿಲ್ನ ಉನ್ನತ ಮಟ್ಟದ ಪ್ರತಿನಿಧಿಗಳೊಂದಿಗೆ ಮಾತುಕತೆ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು.
ಭಾರತ ಸರ್ಕಾರವು ಈಗಾಗಲೇ ‘ರಾಷ್ಟ್ರೀಯ ಡಿಸೈನ್ ನೀತಿ’ಯನ್ನು ಹೊಂದಿದ್ದು, ರಾಜ್ಯವು ಅದರಲ್ಲಿನ ಉಪಯುಕ್ತ ಅಂಶಗಳನ್ನು ತನ್ನ ನೀತಿಯಲ್ಲೂ ಅಳವಡಿಸಿಕೊಳ್ಳಲಿದೆ. ಜತೆಗೆ,ವರ್ಲ್ಡ್ ಡಿಸೈನ್ ಕೌನ್ಸಿಲ್ನಿಂದಲೂ ಸಲಹೆ ಪಡೆದುಕೊಂಡು ಸಮಗ್ರ ನೀತಿ ರೂಪಿಸಲಾಗುವುದು ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.
ಸಚಿವರ ಜತೆ ವಿಚಾರ ವಿನಿಮಯದ ವೇಳೆ ನಿಯೋಗವು, ಬೆಂಗಳೂರು ಡಿಸೈನ್ ಡಿಸ್ಟ್ರಿಕ್ಟ್ (ಬಿಡಿಡಿ) ಅನ್ನು ಸ್ಥಾಪಿಸಲು ಅಗತ್ಯವಿರುವ ಔದ್ಯಮಿಕ ನೆರವನ್ನು ನೀಡುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿತು. ಜತೆಗೆ, ಇದನ್ನೆಲ್ಲ ಶಾಲಾ–ಕಾಲೇಜುಗಳ ಪಠ್ಯಕ್ರಮದ ಭಾಗವನ್ನಾಗಿ ಮಾಡುವ ಪ್ರಕ್ರಿಯೆಯಲ್ಲೂ ಸಹಾಯ ನೀಡುವ ಭರವಸೆ ನೀಡಿತು.
ಈ ಕುರಿತು ಹೆಚ್ಚಿನ ಚರ್ಚೆಗಾಗಿ ಬೆಂಗಳೂರಿಗೆ ಬರುವಂತೆ ನಿಯೋಗದ ಸದಸ್ಯರನ್ನು ಆಹ್ವಾನಿಸಿದರು. ಸಮಾಜದಲ್ಲಿ ವಿನ್ಯಾಸದ ಬಗ್ಗೆ ಜಾಗೃತಿ ಮೂಡಿಸಿ, ಈ ಜ್ಞಾನಧಾರೆಗೆ ಬೇಡಿಕೆ ಸೃಷ್ಟಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡುವುದು ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿಬೆಂಗಳೂರು ಡಿಸೈನ್ ಡಿಸ್ಟ್ರಿಕ್ಟ್ ಸ್ಥಾಪನೆ ನೆರವಾಗಲಿದೆ. ಮೊದಲಿಗೆ, ಪ್ರಾಯೋಗಿಕವಾಗಿ ಆಯ್ದ ಶಾಲೆಗಳಲ್ಲಿ ಡಿಸೈನ್ ಬೋಧನೆಗೆ ಚಾಲನೆ ನೀಡಬಹುದು. ಇದರ ಫಲಿತಾಂಶ ಆಧರಿಸಿ, ನಂತರ ರಾಜ್ಯಾದ್ಯಂತ ವಿಸ್ತರಿಸಬಹುದು. ರಾಜ್ಯದ ಐಟಿ ಇಲಾಖೆಯೇ ನೂತನ ವಿನ್ಯಾಸ ನೀತಿ ರೂಪಿಸಲಿದೆ ಎಂದು ವಿವರಿಸಿದರು. ನಿಯೋಗದಲ್ಲಿದ್ದ ಡಬ್ಲ್ಯುಡಿಸಿ ಮುಖ್ಯಸ್ಥೆ ಪೌಲಾ ಗ್ರಹಾಂ ಗೆಜಾರ್ಡ್ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.