ADVERTISEMENT

ಕುಮಾರಸ್ವಾಮಿ ಇಸ್ಪೀಟ್, ಗ್ಯಾಂಬ್ಲಿಂಗ್ ಆಡಿದ ಫೋಟೊ ನನ್ನ ಬಳಿ ಇದೆ: ಯೋಗೇಶ್ವರ್

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 2:17 IST
Last Updated 28 ಫೆಬ್ರುವರಿ 2021, 2:17 IST
ಸಚಿವ ಸಿ.ಪಿ ಯೋಗೇಶ್ವರ್‌
ಸಚಿವ ಸಿ.ಪಿ ಯೋಗೇಶ್ವರ್‌    

ಮಂಗಳೂರು: ‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ನಂಬಿಕೆಗೆ ಅರ್ಹರಲ್ಲ. ಅವರೊಂದಿಗೆ ಯಾವುದೇ ಹೊಂದಾಣಿಕೆ ಮಾಡುವುದು ಬೇಡ’ ಎಂದು ಬಿಜೆಪಿ ಹಿರಿಯರಿಗೆ ಮನವಿ ಮಾಡಿದ್ದೇನೆ’ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿಯವರು ವಿಧಾನಪರಿಷತ್‌ನಲ್ಲಿ ಬಿಜೆಪಿಯೊಂದಿಗೆ ಸೇರಿ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಮಾಡಿದರು. ಆದರೆ, ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ ಜೊತೆಗೆ ಕೈಜೋಡಿಸಿದರು. ಹೀಗಾಗಿ, ಅವರನ್ನು ನಂಬಬೇಡಿ ಎಂದು ನಮ್ಮ ಪಕ್ಷದವರಿಗೆ ಹೇಳುತ್ತೇನೆ. ಇದರಿಂದ ನಮ್ಮ ಪಕ್ಷದ ಬೆಳವಣಿಗೆಗೆ ಹಿನ್ನಡೆಯಾಗುತ್ತದೆ’ ಎಂದು ಹೇಳಿದರು.

‘ಕುಮಾರಸ್ವಾಮಿ ಯಾರಿಗೆ ಬೇಕಾದರೂ ಸೂಕ್ತರಾಗುತ್ತಾರೆ. ಅದೇ ಅರ್ಥದಲ್ಲಿ ಅವರನ್ನು ‘ಜೋಕರ್’ ಎಂದು ಹೇಳಿದ್ದೇನೆ. ಅಧಿಕಾರದಲ್ಲಿದ್ದಾಗ ರಾಮನಗರಕ್ಕೆ ಭೇಟಿ ನೀಡಲಿಲ್ಲ. ಈಗ ಗ್ರಾಮ ಪಂಚಾಯತಿ ಮಟ್ಟದ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದಾರೆ. ಅವರಿಗೆ ರಾಜಕೀಯ ಅಭದ್ರತೆ ಕಾಡುತ್ತಿದೆ’ ಎಂದು ಟೀಕಿಸಿದರು.

ADVERTISEMENT

‘ಇಸ್ಪೀಟ್ ಆಟ ನನಗೆ ಗೊತ್ತಿಲ್ಲ. ಆದರೆ, ಕುಮಾರಸ್ವಾಮಿ ಮಲೇಷಿಯಾ, ಸಿಂಗಾಪುರದಲ್ಲಿ ಇಸ್ಪೀಟ್, ಬೇರೆ ಗ್ಯಾಂಬ್ಲಿಂಗ್ ಆಡಿದ ಫೋಟೋ ನನ್ನ ಬಳಿ ಇದೆ. ಬೇಕಾದರೆ ಬಿಡುಗಡೆ ಮಾಡುತ್ತೇನೆ’ ಎಂದು ಹೇಳಿದರು.

‘ಅವರು ನನಗೆ ಬಚ್ಚಾ ಎಂದರೆ ನನಗೇನು ವ್ಯತ್ಯಾಸವಾಗುದಿಲ್ಲ. 20 ವರ್ಷದ ಹಿಂದೆ ಅವರು ರಾಮನಗರಕ್ಕೆ ಬರುವಾಗ ಬಚ್ಚಾನೇ ಆಗಿದ್ದರು’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.