ADVERTISEMENT

ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಸಚಿವ ಪ್ರಭು ಚವ್ಹಾಣ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 23:44 IST
Last Updated 24 ಸೆಪ್ಟೆಂಬರ್ 2020, 23:44 IST
ಪ್ರಭು ಚವ್ಹಾಣ್‌
ಪ್ರಭು ಚವ್ಹಾಣ್‌   

ಬೆಂಗಳೂರು: ‘ನಾನು ಸುಳ್ಳು, ಮೋಸದಿಂದ ಜಾತಿ ಪ್ರಮಾಣಪತ್ರ ಪಡೆದಿರುವುದು ಸಾಬೀತಾದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ. ಸುಳ್ಳು ಎಂದಾದರೆ ಈ ಆರೋಪ ಮಾಡಿರುವ ಮಾಜಿ ಸಚಿವ ಎಚ್‌. ಆಂಜನೇಯ ಬಹಿರಂಗವಾಗಿ ಕ್ಷಮೆ ಕೋರಲಿ’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಸವಾಲು ಹಾಕಿದ್ದಾರೆ.

‘ಪ್ರಭು ಚವ್ಹಾಣ್‌ ಜಾತಿ ಪ್ರಮಾಣ ಪತ್ರ ನಕಲಿಯಾಗಿದ್ದು, ಅವರನ್ನು ಸಂಪುಟದಿಂದ ಕೈಬಿಡಬೇಕು’ ಎಂದು ಚಿತ್ರದುರ್ಗದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಂಜನೇಯ ಆಗ್ರಹಿಸಿದ್ದರು.

‘ನನ್ನ ಜಾತಿ, ಜನ್ಮದ ಮೂಲದ ಬಗ್ಗೆ ತಿಳಿಯಬೇಕಿದ್ದರೆ ನನ್ನ ಕ್ಷೇತ್ರಕ್ಕೆ ಬಂದುವಾಸ್ತವ ಏನೆಂಬುದನ್ನು ಆಂಜನೇಯ ತಿಳಿದುಕೊಳ್ಳಲಿ. ನಾನು ಕರ್ನಾಟಕದವನು, ಅಪ್ಪಟ ಕನ್ನಡಿಗ. ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನ ಬೋಂತಿ ತಾಂಡಾ ನನ್ನ ಹುಟ್ಟೂರು. ಪರಿಶಿಷ್ಟ ಜಾತಿಯ (ಎಸ್.ಸಿ) ಲಂಬಾಣಿ ಜನಾಂಗಕ್ಕೆ ಸೇರಿದ್ದೇನೆ. ಯಾರೋ ಕುತಂತ್ರಿಗಳು ನೀಡಿದ ಸುಳ್ಳು ಮಾಹಿತಿ ನಂಬಿದ ಆಂಜನೇಯ ಅವರು, ನಾನು ಮಹಾರಾಷ್ಟ್ರದಿಂದ ಬಂದವನು ಎಂದು ಆರೋಪಿಸಿದ್ದಾರೆ’ ಎಂದು ಚವ್ಹಾಣ್‌‌ ಹೇಳಿದ್ದಾರೆ.

ADVERTISEMENT

‘ಔರಾದ್ ಕ್ಷೇತ್ರ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದೆ. ನಾನು ಬಾಲ್ಯದಲ್ಲಿದ್ದಾಗ ಅಲ್ಲಿ ಕನ್ನಡ ಶಾಲೆಗಳಿರಲಿಲ್ಲ. ಅನಿವಾರ್ಯವಾಗಿ ಮರಾಠಿ ಕಲಿಯಬೇಕಾಯಿತು. ನನ್ನ ಕ್ಷೇತ್ರದ ನಾಲ್ಕು ಹೋಬಳಿಗಳ 50–60 ಹಳ್ಳಿಗಳ ಒಂದು ಲಕ್ಷದಷ್ಟು ಜನರು ಮರಾಠಿ ಮಾತನಾಡುತ್ತಾರೆ. ಹಾಗಾದರೆ, ಅವರೆಲ್ಲ ಮಹಾರಾಷ್ಟ್ರದವರಾ? ಎಂಬುದಕ್ಕೆ ಆಂಜನೇಯ ಉತ್ತರಿಸಬೇಕು’ ಎಂದೂ ಸವಾಲು ಹಾಕಿದ್ದಾರೆ.

‘2008ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾಗ ನನ್ನ ಜಾತಿ, ಜನ್ಮ ಸ್ಥಳದ ಬಗ್ಗೆ ಆಕ್ಷೇಪ ಎತ್ತಿದ್ದರು. ಆಗ ವಿಚಾರಣೆ ನಡೆಸಿದ್ದ ಅಂದಿನ ಜಿಲ್ಲಾಧಿಕಾರಿ ಹರ್ಷಗುಪ್ತ ಆಕ್ಷೇಪಗಳನ್ನು ತಳ್ಳಿ ಹಾಕಿದ್ದರು. 2009ರಲ್ಲಿ ಬಾಬು ತಾರೆ ಎಂಬುವರು ಜಾತಿ, ಜನ್ಮದ ವಿಷಯ ಕುರಿತು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿದೆ. 2015ರಲ್ಲಿ ಶಂಕರರಾವ ದೊಡ್ಡಿ, ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. 15 ತಿಂಗಳು ವಿಚಾರಣೆ ನಡೆಸಿದ ನಿರ್ದೇಶನಾಲಯ ದೂರಿನಲ್ಲಿ ಹುರುಳಿಲ್ಲ ಎಂದು ಹೇಳಿದೆ’ ಎಂದು ಚವ್ಹಾಣ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.