ADVERTISEMENT

ವಸತಿ ಯೋಜನೆ: ಆದಾಯ ಮಿತಿ ₹ 1.20 ಲಕ್ಷಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 19:51 IST
Last Updated 14 ಮಾರ್ಚ್ 2022, 19:51 IST
ಬಿಜೆಪಿ ಸದಸ್ಯ ಸಿ.ಟಿ.ರವಿ ಮಾತನಾಡಿದರು. ಸದಸ್ಯರಾದ ಬಸವರಾಜ ಮತ್ತಿಮೂಡ, ವೇದವ್ಯಾಸ ಕಾಮತ್‌, ಶಿವನಗೌಡ ನಾಯಕ್‌ ಇದ್ದಾರೆ.
ಬಿಜೆಪಿ ಸದಸ್ಯ ಸಿ.ಟಿ.ರವಿ ಮಾತನಾಡಿದರು. ಸದಸ್ಯರಾದ ಬಸವರಾಜ ಮತ್ತಿಮೂಡ, ವೇದವ್ಯಾಸ ಕಾಮತ್‌, ಶಿವನಗೌಡ ನಾಯಕ್‌ ಇದ್ದಾರೆ.   

ಬೆಂಗಳೂರು: ರಾಜ್ಯದ ವಿವಿಧ ವಸತಿ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆಗೆ ಆದಾಯ ಮಿತಿಯನ್ನು ಗ್ರಾಮೀಣ ಪ್ರದೇಶದಲ್ಲಿ ₹32 ಸಾವಿರದಿಂದ ₹1.20 ಲಕ್ಷಕ್ಕೆ ಹಾಗೂ ನಗರ ಪ್ರದೇಶದಲ್ಲಿ ₹87,600 ದಿಂದ ₹3 ಲಕ್ಷಕ್ಕೆ ಏರಿಸಲಾಗುವುದು. ವಾರದೊಳಗೆ ಈ ಬಗ್ಗೆ ಆದೇಶ ಹೊರಡಿಸಲಾಗುವುದು’ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸಿ.ಟಿ.ರವಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಸಮಾಲೋಚನೆ ನಡೆಸಲಾಗಿದ್ದು, ಸದನದಲ್ಲಿ ಮಂಗಳವಾರಅವರು ಈ ಕುರಿತ ಹೇಳಿಕೆ ನೀಡಲಿದ್ದಾರೆ’ ಎಂದರು.

ಸಿ.ಟಿ.ರವಿ, ‘₹32 ಸಾವಿರ ಆದಾಯ ಮಿತಿ ನಿಗದಿ ಮಾಡಿರುವುದರಿಂದ ಫಲಾನುಭವಿಗಳ ಆಯ್ಕೆ ಕಷ್ಟವಾಗಿದೆ’ ಎಂದರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,‘ಫಲಾನುಭವಿಗಳಿಗೆ ಸುಳ್ಳು ದಾಖಲೆ ಸೃಷ್ಟಿಸಿಕೊಟ್ಟರೆ ಆಯಿತಲ್ಲ’ ಎಂದು ವ್ಯಂಗ್ಯವಾಗಿ ಹೇಳಿದರು.

ADVERTISEMENT

ಸೋಮಣ್ಣ, ‘ಆದಾಯ ಮಿತಿಯನ್ನು ಹಲವು ವರ್ಷಗಳ ಹಿಂದೆಯೇ ನಿಗದಿಪಡಿಸಲಾಗಿದೆ’ ಎಂದು ಸಮಜಾಯಿಷಿ ನೀಡಿದರು. ಆಗ ಕಾಗೇರಿ, ‘ನೀವು ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆಯಿತಲ್ಲ. ಸಮಸ್ಯೆ ಬಗೆಹರಿಸಬೇಕಿತ್ತಲ್ಲ’ ಎಂದರು.

ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌, ‘ಆದಾಯ ಮಿತಿ ನಿಗದಿ ಮಾಡುವ ಅಧಿಕಾರ ವಸತಿ ಇಲಾಖೆಗೆ ಇಲ್ಲ. ಈ ಬಗ್ಗೆ ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.