ADVERTISEMENT

26 ರೈಲು ನಿಲ್ದಾಣಗಳಲ್ಲಿ ‘ಒಂದು ನಿಲ್ದಾಣ ಒಂದು ಉತ್ಪನ್ನ’

​ಪ್ರಜಾವಾಣಿ ವಾರ್ತೆ
Published 12 ಮೇ 2023, 15:59 IST
Last Updated 12 ಮೇ 2023, 15:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸ್ಥಳೀಯ/ದೇಸಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ ಕರಕುಶಲಕರ್ಮಿಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ರೈಲ್ವೆ ಇಲಾಖೆಯು ಕರ್ನಾಟಕ 26 ರೈಲು ನಿಲ್ದಾಣಗಳಲ್ಲಿ ‘ಒಂದು ನಿಲ್ದಾಣ–ಒಂದು ಉತ್ಪನ್ನ’ ಯೋಜನೆ ಆರಂಭಿಸಿದೆ. 21 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳ 728 ನಿಲ್ದಾಣಗಳಲ್ಲಿ ಈ ಯೋಜನೆ ಆರಂಭವಾಗಿದೆ.

ಈ ಯೋಜನೆಯಡಿ ರೈಲ್ವೆ ನಿಲ್ದಾಣಗಳಲ್ಲಿ ಮಳಿಗೆಗಳನ್ನು ತೆರೆಯಲಾಗುತ್ತದೆ. ಸ್ಥಳೀಯ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ಮಾಡಲಾಗುತ್ತದೆ. ಆಯಾ ಪ್ರದೇಶದ ನಿರ್ದಿಷ್ಟ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಲಾಗುತ್ತದೆ. ಸ್ಥಳೀಯ ಬುಡಕಟ್ಟು ಸಮುದಾಯದವರು ಮಾಡಿದ ಕಲಾಕೃತಿಗಳು, ಸ್ಥಳೀಯ ನೇಕಾರರ ಕೈಮಗ್ಗಗಳು, ಕರಕುಶಲ ವಸ್ತುಗಳು, ಮಸಾಲೆ ಚಹಾ, ಕಾಫಿ, ಸಂಸ್ಕರಿತ ಆಹಾರ ಪದಾರ್ಥಗಳು/ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಯಾವ ನಿಲ್ದಾಣಗಳು?: ಬಳ್ಳಾರಿ ಜಂಕ್ಷನ್‌, ಬೆಂಗಳೂರು ಕಂಟೋನ್ಮೆಂಟ್‌, ಬಂಗಾರಪೇಟೆ, ಬೆಳಗಾವಿ, ಬೀದರ್‌, ಗದಗ, ಹುಬ್ಬಳ್ಳಿ, ಕೆಂಗೇರಿ, ಕೆ.ಆರ್‌.ಪುರ, ಕೆಎಸ್‌ಆರ್‌ ಬೆಂಗಳೂರು, ಮಂಡ್ಯ, ಮಂಗಳೂರು ಸೆಂಟ್ರಲ್‌, ರಾಯಚೂರು, ತುಮಕೂರು, ವಿಜಯಪುರ, ಯಾದಗಿರಿ, ಯಲಹಂಕ, ಯಶವಂತಪುರ, ಅರಸೀಕೆರೆ, ದಾವಣಗೆರೆ, ಹಾವೇರಿ, ಮೈಸೂರು, ಪಾಂಡವಪುರ, ಶಿವಮೊಗ್ಗ, ಸುಬ್ರಹ್ಮಣ್ಯ ರಸ್ತೆ, ತಿಪಟೂರು. ಈ ನಿಲ್ದಾಣಗಳ ಮಳಿಗೆಗಳಲ್ಲಿ ಚನ್ನಪಟ್ಟಣದ ಆಟಿಕೆಗಳು, ಗಿರಣಿ ಎಣ್ಣೆಗಳು (ಕಡಲೆ ಎಣ್ಣೆ, ಬೇವಿನ ಎಣ್ಣೆ), ತೆಂಗಿನಕಾಯಿ ಸಿಹಿತಿಂಡಿಗಳು, ತೆಂಗಿನಕಾಯಿ ವಸ್ತುಗಳು ಹಾಗೂ ತೆಂಗಿನ ಉದ್ಯಮದ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.